ಕಿತ್ತೂರ ಸಂಸ್ಥಾನದ ಈ ಐತಿಹಾಸಿಕ ಸ್ಥಳಕ್ಕೆ ಬೇಕಿದೆ ಅಭಿವೃದ್ಧಿ ಚೇತರಿಕೆ

ಉಳವಯ್ಯ ಹಿರೇಮಠ

ಚನ್ನಮ್ಮನಕಿತ್ತೂರ: ಐತಿಹಾಸಿಕ ಕಿತ್ತೂರಿನ ಚೌಕಿ ಮಠವು ಹಾಳು ಕೊಂಪೆಯಾಗಿ ಹಲವು ವರ್ಷ ಉರುಳಿದರೂ ಅಭಿವೃದ್ಧಿ ಪ್ರಾಧಿಕಾರ ಮಠದ ಅಭಿವೃದ್ಧಿಯನ್ನೇ ಮರೆತಿದೆ.

ಪಟ್ಟಣದ ಕೊನೆಯ ಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಮಠವನ್ನು ಅಲ್ಲಪ್ಪಗೌಡ ಸರದೇಸಾಯಿಯವರು ಕಿತ್ತೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ಮಾಡಲಾರಂಭಿಸಿದ ಸಂದರ್ಭದಲ್ಲಿ ಆದಿಗುರುಸಿದ್ಧ ಸ್ವಾಮೀಜಿ ರಾಜ ಗುರುಗಳೆಂದು ಗೌರವಿಸಿ ಅವರ ನಿತ್ಯ ಶಿವಯೋಗ ಪೂಜಾನುಷ್ಠಾನಕ್ಕೆ ಚೌಕಿಮಠವನ್ನು 1660ರಲ್ಲಿ ಕಟ್ಟಿಸಿದ್ದರು. ಸಂಸ್ಥಾನದ ಸಮಸ್ತ ದೊರೆಗಳು ನಿತ್ಯ ರಾಜಗುರುಗಳ ದರ್ಶನ ಪಡೆದು, ಪಾದೋದಕ ಪ್ರಸಾದ ಸ್ವೀಕರಿಸುತ್ತಿದ್ದರು. ಗುರುಗಳ ಮಾರ್ಗದರ್ಶನದಂತೆ ನಡೆಯುತ್ತಿದ್ದರು, ಇಂತಹ ಐತಿಹಾಸಿಕ ಹಿನ್ನೆಲೆಯ ಚೌಕಿಮಠದ ಪರಿಸ್ಥಿತಿ ಹೀಗಾಗಿದೆ. ಹಳೆಯದಾದ ಈ ಚೌಕಿಮಠವನ್ನು ನೂತನ ಕಟ್ಟಡ ಕಟ್ಟಲು ತೆರವುಗೊಳಿಸಿ ಸುಮಾರು ಮೂರು ವರ್ಷಗಳು ಗತಿಸಿ ಸದ್ಯ ಇದು ಕಸ, ಕಂಟೆಗಳ ತಾಣವಾಗಿದೆ.

ಹಳೆಯ ಮಠವನ್ನು ಹಾಗೇ ಬಿಟ್ಟಿದ್ದರೆ ಒಳ್ಳೆಯದಿತ್ತೇನೋ ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಯತ್ನದಿಂದ ಕಿತ್ತೂರ ಅಭಿವೃದ್ದಿ ಪ್ರಾಧಿಕಾರಕ್ಕೆ ಮಂಜೂರಾದ ಹಣದಲ್ಲಿ ಈಗಾಗಲೇ ಚೌಕಿಮಠದ ಹತ್ತಿರ ಸುಮಾರು ರೂ. 10 ಕೋಟಿ ವೆಚ್ಚದಲ್ಲಿ ಸ್ಮಾರಕ ಭವನದ ಕೆಲಸ ಪ್ರಗತಿಯಲ್ಲಿದೆ ಹಾಗೂ ಚೌಕಿ ಮಠವನ್ನು ಅಭಿವೃದ್ಧಿಗೊಳಿಸಲು ರೂ 1.5 ಕೋಟಿ ವೆಚ್ಚದಲ್ಲಿ ನೀಲ ನಕ್ಷೆ ತಯಾರಾಗಿದ್ದು, ಕಾರ್ಯ ಪ್ರಗತಿಯಲ್ಲಿಲ್ಲ. ಸ್ಮಾರಕ ಭವನದ ಜೊತೆಗೆ ಚೌಕಿಮಠದ ಕಟ್ಟಡದ ಕೆಲಸ ಪ್ರಾರಂಭಿಸಬೇಕಾಗಿತ್ತು.

ನೂತನ ಶಾಸಕ ಬಾಬಾಸಾಹೇಬ ಪಾಟೀಲ ಅವರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ಒತ್ತಡ ತಂದು ಐತಿಹಾಸಿಕ ಕ್ಷೇತ್ರ ಚೌಕಿಮಠ ಅಭಿವೃದ್ಧಿಗೊಳಿಸಲಿ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕಿತ್ತೂರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರಭಾವತಿ ಪಕೀರಪೂರ ಪ್ರತಿಕ್ರಯಿಸಿ, ಕಿತ್ತೂರ ಸಂಸ್ಥಾನದ ರಾಜಗುರು ಹಾಗೂ ಸ್ಥಳೀಯ ಭಕ್ತಾದಿಗಳ ಕೋರಿಕೆಯ ಮೇರೆಗೆ ಚೌಕಿಮಠವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅನುದಾನದ ನೀರಿಕ್ಷೆಯಲ್ಲಿ ಕಾಮಗಾರಿ ಕೈಗೊಳ್ಳಲು ಲೋಕೊಪಯೋಗಿ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜುಲೈ ತಿಂಗಳಲ್ಲಿ ನಡೆಯುವ ಪ್ರಾಧಿಕಾರದ ಸಭೆಯಲ್ಲಿ ಅನುದಾನದಕ್ಕಾಗಿ ಬೇಡಿಕೆ ಇಟ್ಟು ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!