ಅಮರ ನಾರಾಯಣಕರ
ಆಲಮೇಲ: ರಾಮಾಯಣ ಕಾಲದ ಪ್ರಾಚೀನತೆ ಹೊಂದಿದ ಪಟ್ಟಣದಿಂದ ಒಂದುವರೆ ಕಿ.ಮಿ. ದೂರಲ್ಲಿರುವ ಐತಿಹಾಸಿಕ ರಾಮಲಿಂಗ ದೇವಸ್ಥಾನ ಸದ್ಯ ಅವಸಾನದ ಅಂಚಿನಲ್ಲಿದೆ.
ಅದು ಸೀತಾಪಹರಣದ ನಂತರ ರಾಮ ಸೀತೆ ಹುಡುಕಾಟಕ್ಕೆ ಲಂಕೆ ಕಡೆ ಪ್ರಯಾಣ ಬೆಳೆಸಿದ ಸಂದರ್ಭ. ಆಗ ರಾಮ ಆಲಮೇಲದ ದಕ್ಷಿಣ ದಿಕ್ಕಿನಲ್ಲಿರುವ ಹಳ್ಳದ ಸಮೀಪ ವಿಶ್ರಾಂತಿ ಮಾಡಿದ್ದ. ನಂತರ ಪೂಜೆ ಮಾಡಿಕೊಂಡು ಹೋಗುವ ಸಂದರ್ಭದಲ್ಲಿ ಶ್ರೀರಾಮನು ಪಂಚ ಮುಖದ ಲಿಂಗ ಪ್ರತಿಷ್ಠಾಪಿಸಿದ್ದಾನೆ ಎಂದು ತಲೆಮಾರುಗಳಿಂದ ನಂಬಲಗಾಗಿದೆ.
ದೇವಸ್ಥಾನದಲ್ಲಿ ಬೃಹದಾಕಾರದ ಕಲ್ಲಿನ ಕಂಬದ ಗರ್ಭಗುಡಿ ಇದ್ದು, ಈ ರೀತಿಯ ಪಂಚಮುಖದ ಲಿಂಗ ಕೆಲವೇ ಕಡೆಗಳಲ್ಲಿ ಇದೆ ಎಂದು ಹೇಳಲಾಗುತ್ತದೆ. ಸದ್ಯ ಅವಸಾನದ ಅಂಚಿನಲ್ಲಿರುವ ದೇವಸ್ಥಾನ, ಮೇಲ್ಛಾವಣಿಯ ಒಂದು ಭಾಗ ಬಿದ್ದು ಹೋಗಿದೆ. ದೇವಸ್ಥಾನದ ಸುತ್ತ ಮುತ್ತ ಮುಳ್ಳೂ ಕಂಠಿಗಳು ಬೆಳೆದಿವೆ. ದೇವಸ್ಥಾನದ ಸುತ್ತ ಹೊಲಗಳಿದ್ದು ಅಲ್ಲಿ ಬೆಳೆ ಇರುವುದರಿಂದ ಸಮೀಪ ಹೋಗುವವರೆಗೆ ದೇವಸ್ಥಾನ ಕಾಣುವುದಿಲ್ಲ.
ನಿಧಿ ಆಸೆಗಾಗಿ ಕಳ್ಳರು ಈ ದೇವಸ್ಥಾನದ ಕೆಲ ಭಾಗ ಕೆಡವಿದ್ದಾರೆ. ಇನ್ನೂ ಕೆಡವಲು ಸಂಚು ನಡೆಸಿದ್ದರು, ಇದನ್ನರಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮತ್ತು ಕೆಲ ಹಿಂದುಪರ ಸಂಘಟನೆಗಳು ಸುಮಾರು 10 ವರ್ಷದ ಹಿಂದೆ ದೇವಸ್ಥಾನದ ಜೀಣೋದ್ಧಾರಕ್ಕಾಗಿ ಶ್ರಮ ಪಟ್ಟಿದ್ದರು.
ಗ್ರಾಮಸ್ಥರು ಶ್ರಾವಣ ಮಾಸದಲ್ಲಿ ಹಾಗೂ ಮಹಾ ಶಿವರಾತ್ರಿಯಂದು ಈ ರಾಮಲಿಂಗ ದೇವಸ್ಥಾನಕ್ಕೆ ಭೇಟಿ ಕೋಡುತ್ತಾರೆ. ಇದನ್ನು ಬಿಟ್ಟರೆ ಉಳಿದ ಯಾವ ದಿನವೂ ಈ ಕಡೆ ತಿರುಗಿ ಸಹ ನೋಡುವುದಿಲ್ಲ. ಈ ದೇವಸ್ಥಾನಕ್ಕೆ ಹೋಗಲೂ ಸರಿಯಾದ ರಸ್ತೆ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.
ಇನ್ನಾದರೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಮಲಿಂಗ ದೇವಾಸ್ಥಾನ ಜೀರ್ಣೋದ್ಧಾರ ಆಗಬೇಕು, ಪುರಾತತ್ವ ಇಲಾಖೆಯವರು ಇತ್ತಕಡೆ ಗಮನಹರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.