ಕೊಡಗಿನಲ್ಲಿ ಮರುಕಳಿಸಿದ ಕ್ರೀಡೆಗಳ ಗತ ವೈಭವ: ಶಾಸಕ ಕೆ.ಜಿ.ಬೋಪಯ್ಯ ಹರ್ಷ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಕ್ರೀಡೆಗಳ ತವರೂರು. ಕೆಲವು ವರ್ಷಗಳಿಂದ ಕ್ರೀಡೆಗಳ ಆಯೋಜನೆ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕ್ರೀಡೆಗಳ ಗತವೈಭವ ಮರುಕಳಿಸಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹರ್ಷ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ, ತೋಮರ ಗ್ರಾಮದ ದ ಲೆಜೆಂಡ್ಸ್ ತೋರ ಕ್ರೀಡಾ ಸಂಸ್ಥೆಯ ವತಿಯಿಂದ ತೋಮರ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ 3ನೇ ವರ್ಷದ ಹೊನಲು ಬೆಳಕಿನ ಟಿ.ಕೆ.ಪಿ.ಎಲ್ ಪ್ರೋ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಯುವಕರಲ್ಲಿ ಸಂಬಂಧಗಳು ಬೆಸೆದು ಒಗ್ಗಟ್ಟು ಎಂಬುದು ಗಟ್ಟಿಯಾಗುತ್ತದೆ. ಗ್ರಾಮೀಣ ಭಾಗದ ಕ್ರೀಡಾ ಪಟುಗಳು ದೇಶಿಯ ಮತ್ತು ಅಂತರ ರಾಷ್ಟ್ರೀಯ ಮಟ್ಟಲ್ಲಿ ಸಾಧನೆಗೈದು ಗ್ರಾಮದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ. ಕಬ್ಬಡಿ ಗ್ರಾಮೀಣ ಕ್ರೀಡೆಯಾಗಿದ್ದು ಇಂದು ದೇಶವ್ಯಾಪಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೈದಾನದಲ್ಲಿ ತಮ್ಮ ಕ್ರೀಡಾ ಸ್ಫೂರ್ತಿಯೊಂದಿಗೆ ಕ್ರೀಡೆಯ ಪ್ರದರ್ಶನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈ ಮೊದಲು ತೋಮರ ಗ್ರಾಮವು ಕುಗ್ರಾಮವಾಗಿತ್ತು. ಆದರೆ ಇಂದು ಅಭಿವೃದ್ಧಿಗೊಂಡು ಮುಂದುವರೆದ ಗ್ರಾಮವಾಗಿದೆ. 2019ರಲ್ಲಿ ಗ್ರಾಮದಲ್ಲಿ ಸಂಭವಿಸಿದ ದುರ್ಘಟನೆಯಿಂದ ಗ್ರಾಮದ ಚಿತ್ರಣವೇ ಬದಲಾಗಿತ್ತು. ಇಲ್ಲಿ ವಾಸ ಮಾಡುವುದು ಕಷ್ಟ ಎಂಬ ಭಾವನೆ ಇಲ್ಲಿನ ವಾಸಿಗಳಲ್ಲಿತ್ತು. ಅದರೆ ಗ್ರಾಮವಾಸಿಗಳು ಎದೆಗುಂದದೆ ಜೀವನ ಸಾಗಿಸುತ್ತಿದ್ದಾರೆ. ಯುವಕರು ದುಶ್ಚಟಗಳಿಗೆ ದಾಸರಾಗದೆ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿಬೇಕು. ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿ ಮಾಡಿ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವಂತರಾಗಬೇಕು ಎಂದು ಹೇಳಿದರು.
ಕೆದಮುಳ್ಳೂರು ಗ್ರಾ.ಪಂ.ಮಾಜಿ ಸದಸ್ಯ ಚೋಟು ಬಿದ್ದಪ್ಪ ಮಾತನಾಡಿದರು.
ಕಾರ್ಯಕ್ರಮದ ಮೊದಲಿಗೆ 2019ರಲ್ಲಿ ದುರ್ಘಟನೆಯಲ್ಲಿ ಮಡಿದ ವ್ಯಕ್ತಿಗಳಿಗೆ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಕ್ರೀಡಾಂಗಣದ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ಕೆ.ಎಂ.ರಾಮಯ್ಯ, ಎಂ.ಎಂ. ಪರಮೇಶ್ವರ, ಜಯಂತಿ ಮತ್ತು ದಾನಿಗಳಾದ ಬೈಮನ ಮಧು ನಾಣಯ್ಯ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!