ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಕಾಲ್ತುಳಿತ ಪ್ರಕರಣ ತೀವ್ರ ರಾಜಕೀಯ ತೀವ್ರತೆ ಪಡೆದುಕೊಂಡಿದೆ. 11 ಮಂದಿಯ ಸಾವಿಗೆ ಕಾರಣವಾದ ಈ ಘಟನೆಯ ನಂತರ ರಾಜಕೀಯ ವಾತಾವರಣ ತೀವ್ರಗೊಂಡಿದ್ದು, ಸಿಐಡಿ ತನಿಖೆ ಆರಂಭವಾಗಿದೆ. ಇತ್ತ ಬಿಜೆಪಿ ಪಕ್ಷ ರಾಜ್ಯ ಸರ್ಕಾರದ ವಿರುದ್ಧ ಘೋಷಣಾತ್ಮಕ ಪ್ರತಿಭಟನೆಗೆ ಮುಂದಾಗಿದೆ.
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗನ ಮದುವೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ದಿಢೀರ್ ನಿರ್ಧಾರವಾಗಿ ಅವರ ಕರ್ನಾಟಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಸಂಬಂಧ ಮಾಹಿತಿ ರಾಜ್ಯದ ನಾಯಕರಿಗೆ ಕೇಂದ್ರದಿಂದ ನೀಡಲಾಗಿದೆ.
ಅಮಿತ್ ಶಾ ಭೇಟಿಯ ರದ್ದತಿ ಹಿಂದೆ ಯಾವ ಕಾರಣವಿದೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿದೆ. ಕೆಲ ಮೂಲಗಳ ಪ್ರಕಾರ, ಪ್ರಕರಣದ ತೀವ್ರತೆಯ ಹಿನ್ನೆಲೆ, ಭಾವೋದ್ರಿಕ್ತ ಪರಿಸ್ಥಿತಿ ಮತ್ತು ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ ಶಾ ಅವರ ಆಗಮನ ತಾತ್ಕಾಲಿಕವಾಗಿ ಅನಿವಾರ್ಯವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ, ಘಟನೆಯಲ್ಲಿ ನೈತಿಕ ಹೊಣೆವಹಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಈ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಮೂಡಿಸುತ್ತಿವೆ.
ನಮ್ಮ ನೆನಪು ಬಹಳ ಕ್ಷಣಿಕವಾದದ್ದು. ಶೀಘ್ರವಾಗಿ ಇದನ್ನೆಲ್ಲ ಮರೆತು ‘ life as usual ‘ ಎನ್ನುವಂತೆ ಜೀವನದ ಹಾದಿಯನ್ನು ಹಿಡಿಯುವೆವು ನಾವು. ಏನೂ ಬದಲಾಗುವುದಿಲ್ಲ. ಜೀವನ ಎಂದಿನಂತೆ ಸಾಗುವುದು ಮತ್ತೆ ನಮ್ಮ ಸಿಎಂ ಮತ್ತು ಉಪ ಮುಖ್ಯ ಮಂತ್ರಿಗಳ ಜೀವನ ಶೈಲಿಗೆ ಏನೊಂದೂ ಚುಕ್ಕೆ ಬರದು… ಇದೇ ನಮ್ಮ ಹಣೆ ಬರಹ! ಇದುವೇ ಜೀವ, ಇದುವೇ ಜೀವನ!