ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸಿದ ಬಳಿಕ ದೇಶದಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಳವಾಗಿವೆ ಎಂಬ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿಕೆಗೆ ನಿರ್ಭಯಾ ಅವರ ತಾಯಿ ಆಶಾದೇವಿ ಛೀಮಾರಿ ಹಾಕಿದ್ದಾರೆ.
ಅತ್ಯಾಚಾರಿಗಳಿಗೆ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಸಿಎಂ ಗೆಹ್ಲೋಟ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶದ ಮಹಿಳಾ ಸಮುದಾಯದ ಕ್ಷಮೆ ಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಇದೊಂದು ತೀರಾ ನಾಚಿಕೆಗೇಡಿನ ಹೇಳಿಕೆ. ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಇದೀಗ ಇಳಿ ಪ್ರಾಯದಲ್ಲೂ ಈ ತೆರ ಹೇಳಿಕೆ ನೀಡುತ್ತಿರುವುದು ತೀರಾ ಅವಮಾನಕರ. ಇವರೆಲ್ಲ ಅದ್ಹೇಗೆ ಸಚಿವರು, ಮುಖ್ಯಮಂತ್ರಿಗಳಾಗ್ತಾರೋ… ಬಹುಶ: ರಾಜ್ಯದ ಎಲ್ಲಾ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಅವರನ್ನು ವೋಟ್ಬ್ಯಾಂಕ್ ಆಗಿ ಬಳಸುತ್ತಿರಬಹುದು.
ಪ್ರಸಕ್ತ ಕೇಂದ್ರ ಸರಕಾರದ ತುಂಬು ಕಾಳಜಿ, ನೆರವಿನಿಂದಾಗಿ ನನ್ನ ಮಗಳ ಬರ್ಬರ ಅತ್ಯಾಚಾರ- ಅನ್ಯಾಯದ ಸಾವಿನ ಪ್ರಕರಣದಲ್ಲಿ ನಮಗೆ ನ್ಯಾಯ ದೊರೆತಿದೆ. ಇದಕ್ಕಾಗಿ ಸರಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿರುವ ಆಶಾದೇವಿ, ಹೆಣ್ಮಕ್ಕಳು ಅತ್ಯಾಚಾರಕ್ಕೀಡಾಗಿ ಕೊಲೆಯಾಗಬೇಕು ಮತ್ತು ಆರೋಪಿ ಅತ್ಯಾಚಾರಿಗಳಿಗೆ ರಾಜಾರೋಷ ಅಡ್ಡಾಡಲು ಅವಕಾಶವೀಯಬೇಕೆಂಬುದು ಗೆಹ್ಲೋಟ್ ಇರಾದೆಯೇ ಎಂದವರು ಪ್ರಶ್ನಿಸಿದ್ದಾರೆ.