ಹೊಸದಿಗಂತ ವರದಿ ಸೋಮವಾರಪೇಟೆ:
ಇಲ್ಲಿಗೆ ಸಮೀಪದ ಐಗೂರು ಬಳಿ ರಾಜ್ಯ ಹೆದ್ದಾರಿಯ ಕಬ್ಬಿಣ ಸೇತುವೆ ಮಧ್ಯದಲ್ಲಿ ಗುಂಡಿ ಬಿದ್ದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮಾರ್ಗವಾಗಿ ಸೇತುವೆ ಮೇಲೆ ಚಲಿಸುತ್ತಿದ್ದು, ಸವಾರರು ಭಯದಿಂದ ಸೇತುವೆ ದಾಟುತ್ತಿದ್ದಾರೆ.
ಸೇತುವೆಯಲ್ಲಿ ಗುಂಡಿ ಬಿದ್ದಿರುವ ಮಾಹಿತಿ ತಿಳಿದ ಶಾಸಕ ಡಾ.ಮಂಥರ್ ಗೌಡ ಅಲ್ಲಿನ ಸ್ಥಳೀಯರೊಂದಿಗೆ ಮಾತನಾಡಿ ಈ ಸೇತುವೆಗೆ 10 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಶೀಘ್ರ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
ಸದ್ಯಕ್ಕೆ ಈಗ ಆಗಿರುವ ಗುಂಡಿಯನ್ನು ಮುಚ್ಚಿ ಕೆಳಭಾಗದಲ್ಲಿರುವ ಕಬ್ಬಿಣದ ಕಂಬಗಳಿಗೆ ವೆಲ್ಡಿಂಗ್ ಮಾಡಲಾಗುತ್ತದೆ. ಈ ರಸ್ತೆ ಮಾರ್ಗವಾಗಿ ಹಾದು ಹೋಗುವ ಭಾರೀ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಸೇತುವೆಗೆ ಸುಮಾರು 182 ವರ್ಷಗಳ ಇತಿಹಾಸವಿದ್ದು, ಈ ಸೇತುವೆಯನ್ನು ಬ್ರಿಟಿಷ್ ಅಧಿಕಾರಿಯಾದ ಲಾರ್ಡ್ ಲೂಯಿಸ್’ನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿರುವುದಾಗಿ ತಿಳಿದು ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಸೇತುವೆ ಸರಿಯಾದ ನಿರ್ವಹಣೆ ಇಲ್ಲದೆ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ.