ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಮನೆಯಲ್ಲಿ ಅಚಾತುರ್ಯ ಘಟನೆಗಳು ಸಂಭವಿಸುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ನವ ವಧುವೊಬ್ಬಳು ಗಂಡನಿಗೆ ಪ್ರಧಾನ ಮಂತ್ರಿಯಾರೆಂದು ಗೊತ್ತಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದು ಮಾಡಿರುವ ವಿಭಿನ್ನ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮದುವೆಯಾದ ಬಳಿಕ ನವವಧುವೊಬ್ಬಳು ದೇಶದ ಪ್ರಧಾನಮಂತ್ರಿ ಯಾರೆಂದು ಪತಿಗೆ ಪ್ರಶ್ನೆ ಕೇಳಿದ್ದಾಳೆ. ಆತ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಯುವತಿ ಮದುವೆ ಮುರಿದುಕೊಂಡಿದ್ದಾಳೆ.
ಉತ್ತರಪ್ರದೇಶದ ಸೈದ್ಪುರ ಠಾಣೆ ವ್ಯಾಪ್ತಿಯ ನಾಸಿರ್ಪುರ ಗ್ರಾಮದಲ್ಲಿ ರಾಮ್ ಅವತಾರ್ ಎಂಬುವರ ಮಗ ಶಿವಶಂಕರ್ (27) ಮತ್ತು ಲಖೇದು ರಾಮ್ ಎಂಬುವರ ಪುತ್ರಿ ರಂಜನಾಗೆ ವಿವಾಹ ನಿಶ್ಚಯವಾಗಿತ್ತು. ಜೂನ್ 11ರಂದು ವಿವಾಹವೂ ನೆರವೇರಿತು.
ಮದುವೆಯಾದ ಮರುದಿನ ಎರಡೂ ಕುಟುಂಬದವರು ಸೇರಿ ಖಿಚಡಿ ಕಾರ್ಯಕ್ರಮ ಆಯೋಜಿಸಿದ್ದರು. ಅಂದರೆ ಪ್ರಶ್ನೋತ್ತರ ಆಟವನ್ನು ಏರ್ಪಡಿಸಿದ್ದರು. ವಧುವಿನ ಕಡೆಯವರು ವರನಿಗೆ, ವರನ ಕಡೆಯವರು ವಧುವಿಗೆ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಆಟವಿದು. ಈ ಖಿಚಡಿ ಆಡುವಾಗ ವಧುವಿನ ಸೋದರಿ ವರನಿಗೆ ದೇಶದ ಪ್ರಧಾನಿ ಯಾರೆಂದು ಕೇಳಿದ್ದಾರೆ. ಆದರೆ ಅದಕ್ಕೆ ವರ ಉತ್ತರ ನೀಡಲಿಲ್ಲ. ಬಳಿಕ ಇನ್ನೂ ಕೆಲವು ಪ್ರಶ್ನೆ ಕೇಳಿದಾಗಲೂ ವರನ ಕಡೆಯಿಂದ ಉತ್ತರವೇ ಸಿಗಲಿಲ್ಲ. ಇದರಿಂದ ಕೋಪಗೊಂಡ ವಧು ಸಾಮಾನ್ಯ ಜ್ಞಾನವಿಲ್ಲದ ಗಂಡ ತನಗೆ ಬೇಡ ಎಂದು ಆ ಕ್ಷಣವೇ ಮದುವೆ ಮುರಿದುಕೊಂಡಿದ್ದಾಳೆ. ಬಳಿಕ ಆಕೆಯ ಮತ್ತು ವರನ ಮನೆಯವರ ಒತ್ತಾಯದ ಮೇರೆಗೆ ವರನ ಕಿರಿಯ ಸಹೋದರನನ್ನು ಮತ್ತೆ ಮದುವೆಯಾಗಿದ್ದಾಳೆ.