ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಂಸತ್ತಿನ ಆವರಣದಲ್ಲಿ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ತಮ್ಮ “ದೇಶದ್ರೋಹಿ ಸ್ನೇಹಿತ” ಎಂದು ಕರೆದಿದ್ದಾರೆ.
ಕಲಾಪಕ್ಕೂ ಮುನ್ನಾ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ರಾಹುಲ್ ಗಾಂಧಿ ಬಿಟ್ಟು ಅವರನ್ನು “ದೇಶದ್ರೋಹಿ ಸ್ನೇಹಿತ” ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರವನೀತ್ ಬಿಟ್ಟು, ರಾಹುಲ್ ಗಾಂಧಿಯನ್ನು “ದೇಶ್ ಕೆ ದುಷ್ಮನ್ (ರಾಷ್ಟ್ರದ ಶತ್ರು) ಕರೆಯುವ ಮೂಲಕ ತಿರುಗೇಟು ನೀಡಿದ್ದಾರೆ.
ಪಾರ್ಲಿಮೆಂಟ್ ನ ಪ್ರಮುಖ ದ್ವಾರದ ಬಳಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ರವನೀತ್ ಸಿಂಗ್ ಬಿಟ್ಟು ಹೋಗುತ್ತಿರುವುದನ್ನು ನೋಡಿದ ರಾಹುಲ್ ಗಾಂಧಿ, “ಇಲ್ಲಿ ಒಬ್ಬ ದೇಶದ್ರೋಹಿ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದು ಹೇಳಿ, ಬಿಟ್ಟುಗೆ ಶೇಕ್ ಹ್ಯಾಂಡ್ ಮಾಡುತ್ತಾರೆ. ಹಲೋ, ಬ್ರದರ್ ನನ್ನ ದೇಶದ್ರೋಹಿ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್ ಗೆ ಬರ್ತೀರಾ ಎಂದಿದ್ದಾರೆ. ಆಗ ಶೇಕ್ ಹ್ಯಾಂಡ್ ಮಾಡದ ಬಿಟ್ಟು, ರಾಹುಲ್ ಗಾಂಧಿಯನ್ನು ದೇಶದ ಶತ್ರು ಅಂತಾ ಕರೆದಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ (MoS) ರವನೀತ್ ಸಿಂಗ್ ಬಿಟ್ಟು, 2024 ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಈ ಹಿಂದೆ ಕಾಂಗ್ರೆಸ್ನಿಂದ ಮೂರು ಬಾರಿ ಸಂಸದರಾಗಿದ್ದರು.
ಕಾಂಗ್ರೆಸ್ ಸಂಸದರ ಪ್ರತಿಭಟನೆ
ಎಂಟು ಪ್ರತಿಪಕ್ಷಗಳ ಸದಸ್ಯರನ್ನು ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸಂಸತ್ ಆವರಣದಲ್ಲಿ ಮುಂಜಾನೆ ಪ್ರತಿಭಟನೆ ನಡೆಸಿದ್ದರು.



