ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಜೊತೆ ಲಂಡನ್ನಿನ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
ದೇವಾಲಯಕ್ಕೆ ಆಗಮಿಸಿದ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ದಂಪತಿಯನ್ನು ದೇವಾಲಯ ಆಡಳಿತ ಮಂಡಳಿ ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ದೇವಾಲಯದ ಹಿರಿಯ ಅರ್ಚಕರ ಮಾರ್ಗದರ್ಶನದಲ್ಲಿ ಪೂಜೆ ಸಲ್ಲಿಸಿದರು. ಇಡೀ ದೇವಸ್ಥಾನ ಪ್ರದಕ್ಷಿಣೆ ಹಾಕಿದ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಭವ್ಯವಾಗಿ ನಿರ್ಮಾಣವಾಗಿರುವ ದೇಗುಲವನ್ನ ಕಣ್ತುಂಬಿಕೊಂಡರು.
ಈ ದೇವಾಲಯವನ್ನು ನೆಸ್ಡನ್ ಮಂದಿರ (Neasden Temple) ಎಂದು ಕರೆಯಲಾಗುತ್ತದೆ.
ಬಳಿಕ ದೇವಾಲಯದ ಸಿಬ್ಬಂದಿ ಹಾಗೂ ಸಮುದಾಯದ ಮುಖಂಡರೊಂದಿಗೆ ರಿಷಿ ಸುನಕ್ ಸಂವಾದ ನಡೆಸಿದರು.
ಈ ವೇಳೆ ಟಿ೨೦ ವರ್ಲ್ಡ್ ಕಪ್ ಗೆದ್ದಿರುವ ಟೀಂ ಇಂಡಿಯಾಗೆ ಶುಭಾಶಯಗಳನ್ನು ಹೇಳುತ್ತಾ ತಮ್ಮ ಮಾತುಗಳನ್ನು ಆರಂಭಿಸಿದರು. ನಾನು ಹಿಂದು, ನಿಮ್ಮೆಲ್ಲರಂತೆಯೇ ನಮ್ಮ ನಂಬಿಕೆಗಳಿಂದಲೇ ಸ್ಪೂರ್ತಿ ಪಡೆದುಕೊಂಡಿದ್ದೇನೆ ಎಂಬ ಹೇಳಿದರು. ಸಂಸತ್ತಿನಲ್ಲಿ ಭಗದ್ಗೀತೆಯೊಂದಿಗೆ ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿಕೊಂಡರು.
ನಾವು ಪಾಲನೆ ಮಾಡಿಕೊಂಡು ಬಂದಿರೋ ನಂಬಿಕೆಗಳೇ ನಮ್ಮ ಕರ್ತವ್ಯ ಪಾಲಿಸಲು ಪ್ರೇರಣೆ ನೀಡುತ್ತವೆ. ನಿಷ್ಠೆಯಿಂದ ಮಾಡುವ ಕೆಲಸ ಮಾಡೋರು ಎಂದಿಗೂ ಅದರ ಫಲಿತಾಂಶದ ಬಗ್ಗೆ ಚಿಂತಿಸಬಾರದು. ಕೆಲಸದಲ್ಲಿ ನಿಷ್ಠೆಯಿದ್ರೆ ಯಶಸ್ಸು ನಿಮ್ಮದಾಗುತ್ತದೆ ಎಂದು ರಿಷಿ ಸುನಕ್ ಕರೆ ನೀಡಿದರು.
ನನ್ನ ಪೋಷಕರಿಂದ ಕಲಿತ ಒಳ್ಳೆಯ ಮೌಲ್ಯಗಳಿಂದ ಇಂದು ಜೀವನವನ್ನು ನಡೆಸುತ್ತಿದ್ದೇನೆ. ನನ್ನ ಹೆಣ್ಣು ಮಕ್ಕಳಿಗೆ ಅದೇ ಮೌಲ್ಯಗಳನ್ನು ಕಲಿಸಿಕೊಡಲು ಬಯಸುತ್ತೇನೆ. ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಲು ನನ್ನ ಧರ್ಮವೇ ಕಾರಣ ಎಂದು ರಿಷಿ ಸುನಕ್ ಹೇಳಿದರು.