ಹೊಸದಿಗಂತ ವರದಿ ಚಿಕ್ಕಮಗಳೂರು:
ನಾನೂ ಕರಸೇವಕ ನನ್ನನ್ನು ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ ರವಿ ನಗರ ಪೊಲೀಸ್ ಠಾಣೆ ಎದುರು ಗುರುವಾರ ಬೆಳಗ್ಗೆ ಧರಣಿ ನಡೆಸಿದರು.
ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಸಿ.ಟಿ.ರವಿ ಮೌನ ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಹಲವು ಮುಖಂಡರು ಠಾಣೆ ಮುಂದೆ ಜಮಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಪೊಲೀಸ್ ಠಾಣೆ ಒಳಗೆ ಸಿ.ಟಿ ರವಿಯವರನ್ನು ಕರೆದುಕೊಂಡು ಹೋದರು. ಈ ವೇಳೆ ಕೆಂಡಾಮಂಡಲರಾದ ಬಿಜೆಪಿ ಕಾರ್ಯಕರ್ತರು ನಾವು ಕರಸೇವಕರೆ ನಮ್ಮನ್ನು ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ನಡುವೆ ಮಾತಿನ ಚಕಮಕಿ ತಳ್ಳಾಟ, ನೂಕಾಟ ನಡೆಯಿತು. ರಾಜ್ಯ ಸರ್ಕಾರದ ವಿರುದ್ಧ, ಸಿ.ಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹ ಪಡಬೇಕಾಯಿತು.
ಕೆಲಕಾಲ ಠಾಣೆ ಎದುರು ಹೈಡ್ರಾಮವೇ ನಡೆಯುತು. ಸಿ.ಟಿ.ರವಿ ಅವರನ್ನು ಬಿಡುಗಡೆಗೊಳಿಸಿದ ನಂತರ ಅವರೊಂದಿಗೆ ಇತರೆ ಕಾರ್ಯಕರ್ತರು ತೆರಳಿದರು.