ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ದೆಹಲಿಯಲ್ಲಿರುವ (Delhi) ತಮ್ಮ ಅಧಿಕೃತ ನಿವಾಸ ತೊರೆದಿದ್ದಾರೆ. ಇಂದು (ಶನಿವಾರ) ಸಂಜೆ ಮನೆ ಖಾಲಿ ಮಾಡಿ ಅಧಿಕಾರಿಗಳಿಗೆ ಕೀ ಹಸ್ತಾಂತರಿಸಿದ್ದಾರೆ .
ಬಳಿಕ ಮಾತನಾಡಿದ ಅವರು, ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದಾರೆ.
ಹಿಂದೂಸ್ತಾನದ ಜನರು ನನಗೆ 19 ವರ್ಷಗಳ ಕಾಲ ಈ ಮನೆಯನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡಿದ್ದಕ್ಕಾಗಿ ತೆತ್ತಿರುವ ಬೆಲೆಯಾಗಿದೆ. ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆಯನ್ನು ತೆರಲು ಸಿದ್ಧ ಎಂದು ಹೊರಡುವ ಮುನ್ನ ಬಂಗಲೆಯ ಹೊರಗೆ ಬಂದು ಹೇಳಿದರು.
10 ಜನಪಥ್ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತಾನು ಹೋಗುತ್ತಿರುವುದಾಗಿ ಅವರು ಹೇಳಿದ್ದು, ಸದ್ಯಕ್ಕೆ ಅಲ್ಲಿಯೇ ಉಳಿಯಲಿದ್ದಾರೆ. ರಾಹುಲ್ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಮನೆ ಖಾಲಿ ಮಾಡುವುದಕ್ಕೆ ಸಹಾಯ ಮಾಡಿದ್ದಾರೆ.
2005 ರಿಂದ 12 ತುಘಲಕ್ ಲೇನ್ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ 52 ವರ್ಷದ ರಾಹುಲ್ ಗಾಂಧಿಯನ್ನು ಗುಜರಾತ್ನ (Gujarat) ಸೂರತ್ನ ನ್ಯಾಯಾಲಯವು ದೋಷಿ ಎಂದು ಹೇಳಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಳೆದ ತಿಂಗಳು ಸಂಸತ್ತಿನ ಕೆಳಮನೆಯಿಂದ ಅನರ್ಹಗೊಳಿಸಲಾಯಿತು. ಈ ಹಿನ್ನೆಲೆ ಅವರಿಗೆ ಸರಕಾರಿ ಮನೆ ತೊರೆಯುವಂತೆ ಸೂಚಿಸಲಾಗಿತ್ತು.
ಲೋಕಸಭೆಯ ಸೆಕ್ರೆಟರಿಯೇಟ್ ಮಾರ್ಚ್ 27 ರಂದು ರಾಹುಲ್ ಗಾಂಧಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ಎರಡು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದ ಶಾಸಕರನ್ನು ಅನರ್ಹಗೊಳಿಸುವ ನಿಯಮಗಳ ಪ್ರಕಾರ ಏಪ್ರಿಲ್ 22ರೊಳಗೆ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ಹೇಳಿತ್ತು .