ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೈತ್ರಾ ಕುಂದಾಪುರ ಬಂಧನವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದ್ರೆ ನನಗೆ ಚೈತ್ರಾ ವೈಯಕ್ತಿಕ ಸಂಪರ್ಕ ಇರಲಿಲ್ಲ, ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಫೋಟೋ ತೆಗೆದಿರಬಹುದು, ಗೊತ್ತಿಲ್ಲ. ರಾಜಕೀಯ ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಬೇಕು, ಪ್ರಕರಣದ ಕುರಿತು ತನಿಖೆ ಆಗುತ್ತಿದ್ದು, ನಿಷ್ಪಕ್ಷವಾಗಿ ತನಿಖೆಯಾಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ನಾವು ಯಾರೂ ಚೈತ್ರಾಳ ಬೆಂಬಲಕ್ಕೆ ನಿಂತಿಲ್ಲ, ಅವಳನ್ನು ರಕ್ಷಣೆ ಮಾಡುತ್ತಿಲ್ಲ. ಅವರ ಜೊತೆ ನೇರ ಸಂಪರ್ಕ ನನಗೆ ಇರಲಿಲ್ಲ. ಪ್ರಕರಣದ ಬಗ್ಗೆ ಮಾಹಿತಿಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇನೆ ಎಂದರು.
ಉಪ್ಪು ತಿಂದವರು ನೀರು ಕುಡಿಯುತ್ತಾರೆ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ನನ್ನ ಜೊತೆ ನೂರಾರು ಮಂದಿ ಫೋಟೋ ತೆಗೆದುಕೊಳ್ಳುತ್ತಾರೆ, ಹಾಗೆ ಚೈತ್ರಾಳು ಫೋಟೋ ತೆಗೆದುಕೊಂಡಿರಬಹುದು. ನನಗೆ ಚೈತ್ರ ಫೋನ್ ಮಾಡಿಲ್ಲ, ನಾನು ಕೂಡ ಅವಳಿಗೆ ಫೋನ್ ಮಾಡಿದ್ದು ಇಲ್ಲ ಎಂದರು.
ಯಾರಿಗೆ ಟಿಕೆಟ್ ಕೊಡಬೇಕು, ಎಲ್ಲಿ ಟಿಕೆಟ್ ಕೊಡಬೇಕು ಅನ್ನೋದು ವರಿಷ್ಠರು ತೀರ್ಮಾನ ಮಾಡುತ್ತಾರೆ. ಭಾರತೀಯ ಜನತಾ ಪಾರ್ಟಿಗೆ ಗಟ್ಟಿಮುಟ್ಟಾದ ನೇತೃತ್ವ ಇದೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ದಾ ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಬೇಕು ಅಂತ ತೀರ್ಮಾನ ಮಾಡುತ್ತಾರೆ. ಸ್ಪರ್ಧೆ ಮಾಡುತ್ತೇನೆ, ಇಲ್ಲಿ ಟಿಕೆಟ್ ಸಿಗುತ್ತದೆ ಅಂತ ಯಾರು ಹೇಳಿಕೊಂಡ್ರು ಅದಕ್ಕೆ ಬೆಲೆ ಇರುವುದಿಲ್ಲ. ರಾಷ್ಟ್ರೀಯ ನಾಯಕರು ಎಲ್ಲಿ, ಯಾರು ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡುತ್ತಾರೆ ಎಂದರು.
ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡರೆ ಕ್ರಮ ಕೈಗೊಳ್ಳಬೇಕು, ಯಾರು, ಯಾರು ಡೆಲ್ಲಿ ನಾಯಕರು, ರಾಜ್ಯನಾಯಕರು ಹೆಸರು ದುರುಪಯೋಗ ಮಾಡಿಕೊಂಡಿದ್ದಾರೆ, ಈ ಲಿಂಕ್ ತನಿಖೆ ಆಗಬೇಕು, ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆ ನಡೆಯಲಿ. ಭಾರತೀಯ ಜನತಾ ಪಾರ್ಟಿಯಲ್ಲಿ ದುಡ್ಡು ತೆಗೆದುಕೊಂಡು ಟಿಕೆಟ್ ನೀಡುವ ಸ್ಥಿತಿಯು ಇಲ್ಲ, ಮುಂದೆ ಬರುವುದೂ ಇಲ್ಲ, ಅಂತಹ ಪಾರ್ಟಿ ಕೂಡ ಭಾರತೀಯ ಜನತಾ ಪಾರ್ಟಿಯಲ್ಲ ಎಂದು ಸ್ಪಷ್ಟ ಪಡಿಸಿದರು.