ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಹಲವು ಟೀಕೆಗಳನ್ನು ಮಾಡುತ್ತಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ಶಶಿ ತರೂರ್ ಅವರು ತಿರುಗೇಟು ನೀಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂದೂರ್ ಬಗ್ಗೆ ಪ್ರಶ್ನೆ ಎತ್ತಿದ್ದ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು, ಶಶಿ ತರೂರ್ ವಿರುದ್ಧವೂ ಟೀಕೆ ಮಾಡಿದ್ದು, 2016ರ ಸರ್ಜಿಕಲ್ ಸ್ಟ್ರೈಕ್’ಗೂ ಮುಂದೆ ಭಾರತ ಎಂದಿಗೂ ಎಲ್ಒಸಿ ಅಂತಾರಾಷ್ಟ್ರೀಯ ಗಡಿ ದಾಟಿರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ನಿಮ್ಮನ್ನು ಬಿಜೆಪಿಯ ಸೂಪರ್ ವಕ್ತಾರರೆಂದು ಘೋಷಿಸಬೇಕೆಂದು ಒತ್ತಾಯಿಸುತ್ತೇನೆ. ಭಾರತಕ್ಕೆ ಬರುವ ಮೊದಲು ನಿಮ್ಮನ್ನು ವಿದೇಶಾಂಗ ಸಚಿವ ಎಂದೂ ಘೋಷಿಸಬೇಕೆಂದು ತಿಳಿಸಿದ್ದರು.
ಈ ಟೀಕೆಗೆ ತಿರುಗೇಟು ನೀಡಿರುವ ಶಶಿ ತರೂರ್ ಅವರು, ಪನಾಮದಲ್ಲಿನ ಸುದೀರ್ಘ ಹಾಗೂ ಯಶಸ್ವಿ ದಿನದ ನಂತರ, ನಾನು ಮಧ್ಯರಾತ್ರಿಯಲ್ಲಿ ನನ್ನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದು, ಇನ್ನು 6 ಗಂಟೆಗಳಲ್ಲಿ ಬೊಗೊಟಾ, ಕೊಲಂಬಿಯಾಗೆ ತೆರಳಬೇಕಿದೆ. ಹೀಗಾಗಿ, ನನಗೆ ಇದಕ್ಕೆಲ್ಲ ಯಾವುದೇ ಸಮಯವಿಲ್ಲ. ಆದರೆ, ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಯೋಧರು ತೋರಿರುವ ಪರಾಕ್ರಮದ ಬಗ್ಗೆ ನಾನು ತೋರಿರಬಹುದಾದ ನಿರ್ಲಕ್ಷ್ಯದ ಕುರಿತು ಅಸೂಯೆಯಿಂದ ಕುದಿಯುತ್ತಿರುವರಿಗೆ, ‘ನಾನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಭಯೋತ್ಪಾದಕ ದಾಳಿಗಳ ವಿರುದ್ಧ ಪ್ರತೀಕಾರದ ಕುರಿತು ಮಾತ್ರ ಮಾತನಾಡುತ್ತಿದ್ದೇನೆಯೇ ಹೊರತು, ಹಿಂದಿನ ಯುದ್ಧಗಳ ಕುರಿತು ಅಲ್ಲ ಎಂದು ಹೇಳಿದರು.
ಇತ್ತೀಚಿನ ವರ್ಷಗಳೊಂದರಲ್ಲೇ ನಡೆದಿರುವ ಹಲವಾರು ಭಯೋತ್ಪಾದಕ ದಾಳಿಗಳ ಉಲ್ಲೇಖಗಳನ್ನು ಆಧರಿಸಿ ನನ್ನ ಹೇಳಿಕೆಗಳಿದ್ದು, ಈ ಹಿಂದೆ ಭಾರತದ ಪ್ರತಿಕ್ರಿಯೆಯನ್ನು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿ ಬಗೆಗಿನ ನಮ್ಮ ಜವಾಬ್ದಾರಿಯುತ ಗೌರವಕ್ಕೆ ಮಾತ್ರ ನಿರ್ಬಂಧಿಸಲಾಗಿತ್ತು ಹಾಗೂ ಸೀಮಿತಗೊಳಿಸಲಾಗಿತ್ತು’ ಎಂದು ತಿಳಿಸಲು ಬಯಸುತ್ತೇನೆ. ಆದರೆ, ನನ್ನ ದೃಷ್ಟಿಕೋನ ಹಾಗೂ ಮಾತುಗಳನ್ನು ತಮಗೆ ಬೇಕಾದಂತೆ ವಿರೂಪಗೊಳಿಸಲು ಎಂದಿನಿಂತೆ ಟೀಕಾಕಾರರಿಗೆ ಹಾಗೂ ಟ್ರೋಲರ್ಗಳಿಗೆ ಸ್ವಾಗತ. ಅದರೆ, ನಿಜವಾಗಿಯೂ ನನಗೆ ಮಾಡಲು ಇನ್ನೂ ಉತ್ತಮ ಕೆಲಸಗಳಿವೆ ಎಂದು ಹೇಳಿದ್ದಾರೆ.