ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ತಾಲಿಬಾನ್ ಆಡಳಿತವನ್ನು ಜಾರಿಗೆ ತಂದು ಮಹಿಳೆಯರನ್ನು ಅವರ ಮನೆಗಳಿಗೆ ಸೀಮಿತಗೊಳಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಬಯಸುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಬಿಜೆಪಿ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಭ್ಯರ್ಥಿ ಅರವಿಂದ ರಾಜಭಾರ್ ಪರ ಘೋಸಿ ಕ್ಷೇತ್ರದಲ್ಲಿ ಮತಯಾಚಿಸಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿವೆ.ಅವರು ಭಗವಾನ್ ರಾಮ ಮತ್ತು ದೇಶ ವಿರೋಧಿ ನಿಲುವನ್ನು ಹೊಂದಿದ್ದಾರೆ. ದಲಿತರು ಮತ್ತು ಹಿಂದುಳಿದ ಸಮುದಾಯಗಳ ಹಕ್ಕುಗಳನ್ನು ನಿರಾಕರಿಸುತ್ತಾರೆ. ಇದೀಗ ಒಬಿಸಿ ಸಮುದಾಯದ ಮೀಸಲಾತಿ ಮೇಲೆ ಅವರ ದೃಷ್ಟಿ ಬಿದ್ದಿದೆ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾದ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುವ ಕುರಿತು ಮಾತನಾಡುಲಾಗುತ್ತಿದೆ. ಆದರೆ, ಇದನ್ನು ಸಾಧ್ಯವಾಗಲು ಬಿಜೆಪಿ ಬಿಡುವುದಿಲ್ಲ. ಈ ಮೀಸಲಾತಿಯು ಒಬಿಸಿ ಸಮುದಾಯಕ್ಕೆ ಸೇರಿದೆ. ಅವುಗಳನ್ನು ಕಸಿದುಕೊಳ್ಳಲು ನಾವು (ಬಿಜೆಪಿ) ಅನುಮತಿಸುವುದಿಲ್ಲ. ಧರ್ಮವು ಮೀಸಲಾತಿಯ ಆಧಾರವಾಗಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದಾರೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.