ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುನ್ಮಾನ ಮತಯಂತ್ರ (ಇವಿಎಂ) ವಿರುದ್ಧ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಂತರ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ತಿರಸ್ಕರಿಸಿದ್ದಾರೆ.
ಸೋಮವಾರ ಸಂಸತ್ ಭವನದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ‘ಇವಿಎಂ ಬಗ್ಗೆ ಪ್ರಶ್ನೆ ಎತ್ತುವವರು ಏನಾದರೂ ಇದ್ದರೆ ಚುನಾವಣಾ ಆಯೋಗಕ್ಕೆ ತೆರಳಿ ಡೆಮೊ ತೋರಿಸಬೇಕು. ಇವಿಎಂ ರ್ಯಾಂಡಮೈಸೇಶನ್ ಸಮಯದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಮತ್ತು ಅಣಕು ಮತದಾನ ಮತ್ತು ಮತ ಎಣಿಕೆ ಸಮಯದಲ್ಲಿ ಬೂತ್ಗಳಲ್ಲಿ ಕೆಲಸ ಮಾಡುವ ಜನರು ಪರಿಶೀಲಿಸಿದರೆ, ಈ ಆರೋಪದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ನಾನು ಭಾವಿಸುತ್ತೇನೆ. ಅರ್ಥಹೀನ ಹೇಳಿಕೆಗಳನ್ನು ನೀಡುವುದರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಇವಿಎಂಗಳ ಬಗ್ಗೆ ಕಾಂಗ್ರೆಸ್ನ ಆಕ್ಷೇಪಣೆಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ಇಂಡಿಯಾ ಬ್ಲಾಕ್ ಸದಸ್ಯ ಒಮರ್ ಅಬ್ದುಲ್ಲಾ ತಿರಸ್ಕರಿಸಿದ ಒಂದು ದಿನದ ನಂತರ ಅಭಿಷೇಕ್ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ಒಮರ್ ಅಬ್ದುಲ್ಲಾ ಅವರು ಈ ವಿಷಯದ ಕುರಿತು, ‘ನೀವು ಗೆದ್ದಾಗ, ನೀವು ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಳ್ಳುತ್ತೀರಿ ಮತ್ತು ನೀವು ಸೋತಾಗ ನೀವು ಇವಿಎಂಗಳನ್ನು ದೂಷಿಸುತ್ತೀರಿ. ನಿಮ್ಮ 100ಕ್ಕೂ ಹೆಚ್ಚು ಸಂಸದರು ಈ ಇವಿಎಂನಿಂದಲೇ ಆಯ್ಕೆಯಾದಾಗ, ನೀವು ಅದನ್ನು ನಿಮ್ಮ ಪಕ್ಷದ ವಿಜಯವೆಂದು ಆಚರಿಸುತ್ತೀರಿ, ನಂತರ ಕೆಲವು ತಿಂಗಳುಗಳ ನಂತರ ನಾವು ಇವಿಎಂಗಳನ್ನು ಇಷ್ಟಪಡುವುದಿಲ್ಲ ಎಂದು ನೀವು ಹೇಳಲು ಹೇಗೆ ಸಾಧ್ಯ. ಏಕೆಂದರೆ ಈಗ ಚುನಾವಣಾ ಫಲಿತಾಂಶಗಳು ನಮಗೆ ಬೇಕಾದಂತೆ ಬರುತ್ತಿಲ್ಲ ಎಂದು ಕಾಲೆಳೆದಿದ್ದರು.
ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದ್ದ ಕಾಂಗ್ರೆಸ್ ವಿರುದ್ಧ ಇದೀಗ ಇಂಡಿಯಾ ಕೂಟದ ಪಕ್ಷಗಳೇ ಟೀಕೆ ಮಾಡುತ್ತಿವೆ.
ಇದರಿಂದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ತೀವ್ರ ಮುಜುಗರಕ್ಕೀಡಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಗೇಲಿ ಮಾಡಿದ್ದಾರೆ.