ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡದೇ ಇರುವ ಮಾತು ಬಂದಿದೆ. ಯಾರ ಮನಸ್ಸಿಗಾದರೂ ಕಸಿವಿಸಿ ಆದರೆ ಕ್ಷಮೆ ಯಾಚನೆ ಮಾಡಿದ್ದೇನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಮಾತನಾಡುವಾಗ ಖಂಡ್ರೆ ಬದಲು ಖರ್ಗೆ ಅಂತಾ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅಂತಾ ಹೇಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವೈಯಕ್ತಿಕವಾಗಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.
ಬಣ್ಣದ ಬಗ್ಗೆ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ. ಅವರ ಜೊತೆ ಕೆಲಸ ಮಾಡಿದ್ದೇನೆ ಗೌರವದಿಂದ ನೋಡುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅಂದಿಲ್ಲ, ಹಾಗೆನಾದರೂ ಆದರೆ ಯಾವುದೇ ಶಿಕ್ಷೆ ಆದರೂ ಓಕೆ ಎಂದರು.
ಈ ವಿಚಾರವನ್ನು ಕಾಂಗ್ರೆಸ್ನವರು ದೊಡ್ಡದು ಮಾಡುತ್ತಿದ್ದಾರೆ. ಜಾತಿ ಬಗ್ಗೆ ಮಾತನಾಡಿಲ್ಲ, ಮಲೆನಾಡಿನ ಜನ ಹಾಗೂ ಬಯಲುಸೀಮೆ ಜನರ ಬಗ್ಗೆ ಮಾತನಾಡಿದ್ದೆ. ಕೆಲವು ಕಡೆ ನನ್ನ ಹೇಳಿಕೆ ಬಗ್ಗೆ ದೂರು ಕೊಟ್ಟಿದ್ದಾರೆ. ನ್ಯಾಯಾಂಗದ ಮೇಲೆ ನನಗೆ ಗೌರವ ಇದೆ. ಉತ್ತರ ಕರ್ನಾಟಕದ ಜನರ ಬಗ್ಗೆ ದ್ವೇಷದ ಭಾವನೆಯಿಂದ ಏನು ಹೇಳಿಲ್ಲ. ಪಾಪ ಅವರು ತುಂಬಾ ಶ್ರಮಜೀವಿಗಳು. ಆ ದಿನ ಸ್ವಲ್ಪ ತಮಾಷೆಯಾಗಿ ಈಶ್ವರ ಖಂಡ್ರೆ ಅವರಿಗೆ ಸ್ವಲ್ಪ ಕೂದಲು ಜಾಸ್ತಿ ಇದೆ ಅನ್ನುವ ಕಾರಣಕ್ಕೆ ಹಾಗೆ ಹೇಳಿದ್ದೆ, ಖರ್ಗೆ ಅವರ ಬಗ್ಗೆ ಮಾತನಾಡಿಲ್ಲ. ನಾನು ಆಡಿದ ಮಾತನ್ನು ಜನಕ್ಕೆ ಬಿಡುತ್ತೇನೆ ಎಂದರು.