ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಸ್ವಾಧೀನ ವಿರುದ್ಧದ ಹೋರಾಟಕ್ಕೆ ಹೋಗಿದ್ದೆ, ನನ್ನನ್ನೂ ಬಂಧಿಸಿ ಎಂದು ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವವನಹಳ್ಳಿ ಹಾಗೂ ಸುತ್ತಮುತ್ತಲ 13 ಗ್ರಾಮಗಳಲ್ಲಿನ ಭೂಸ್ವಾಧೀನ ವಿರೋಧಿಸಿ ಕಳೆದ 3 ವರ್ಷಗಳಿಂದಲೂ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡಾ ದೇವನಹಳ್ಳಿ ರೈತರ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವಲ್ಪ ಹೊತ್ತು ರೈತರ ಹೋರಾಟದಲ್ಲಿ ಧ್ವನಿಗೂಡಿಸಿ ಬೇರೆ ಕಾರ್ಯಕ್ರಮ ನಿಮಿತ್ತ ವಾಪಸ್ ಬಂದಿದ್ದರು. ಈಗ ಕೆಲ ರೈತರು ಹಾಗೂ ಕೆಲ ರೈತ ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಏನಿದು ಅನ್ಯಾಯ? ರಾಜ್ಯ ಸರ್ಕಾರಕ್ಕೆ ಏನಾಗಿದೆ?. ತಮ್ಮ ಭೂಮಿಗೋಸ್ಕರ ದೇವನಹಳ್ಳಿ ರೈತರು ಹೋರಾಡುತ್ತಿದ್ದಾರೆ. ಅವರ ಸಹಾಯಕ್ಕೆ ಬಂದ ಸಾಮಾಜಿಕ ಕಾರ್ಯಕರ್ತರನ್ನೂ ಬಂಧಿಸಿದ್ದೀರ. ಅಷ್ಟೇ ಅಲ್ಲ, 80 ವರ್ಷದ ವೃದ್ಧೆಯು ತಮ್ಮ ಭೂಮಿಗಾಗಿ ಹೋರಾಟಕ್ಕೆ ಬಂದಿದ್ದಾರೆ. ಅವರನ್ನೂ ಬಂಧಿಸಿದ್ದೀರಿ. ನೂರಾರು ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹಳ್ಳಿಗಳಿಂದ ಬಂದಿದ್ದಾರೆ. ಅಲ್ಲಿ ಬಂದಿರುವ ರೈತರು ಹಣದ ಆಸೆಗೆ ಬಂದಿಲ್ಲ ಅಥವಾ ಯಾರದ್ದೋ ಜಮೀನನ್ನು ಕಬ್ಜ ಮಾಡೋದಕ್ಕೆ ಬಂದಿಲ್ಲ. ಅವರೆಲ್ಲರೂ ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಟ ಮಾಡಲು ಬಂದಿದ್ದಾರೆ. ನಾನೂ ಕೂಡಾ ಭಾಗವಹಿಸಿ, ಬೇರೆ ಕಾರ್ಯಕ್ರಮ ಇತ್ತೆಂದು ವಾಪಸ್ಸಾದೆ. ನಾನೂ ಆ ಹೋರಾಟಕ್ಕೆ ಹೋಗಿದ್ದೆ. ನನ್ನನ್ನೂ ಅರೆಸ್ಟ್ ಮಾಡಿ. ಸರ್ಕಾರ ಜನರನ್ನು ಹೀಗೆ ಅಜಾಗರೂಕತೆಯಿಂದ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಇಲ್ಲಿಗೆ ನಿಲ್ಲುತ್ತದೆ ಅಂದುಕೊಳ್ಳಬೇಡಿ. ಈ ಹೋರಾಟ ದೊಡ್ಡದಾಗಲಿದೆ. ಈ ದೌರ್ಜನ್ಯವನ್ನು ನಾವು ಪ್ರಶ್ನಿಸಬೇಕು. ನಾನು ಕರ್ನಾಟಕ ಪ್ರತಿಯೊಬ್ಬ ರೈತನಿಗೂ ಹಾಗೂ ಪ್ರಜೆಗಳಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವಿಂದು ದೇವನಹಳ್ಳಿ ರೈತರ ಪರವಾಗಿ ನಿಲ್ಲಲಿಲ್ಲ ಅಂದ್ರೆ ನಾಳೆ ನಮಗೂ ಈ ಗತಿ ಬರುತ್ತದೆ” ಎಂದು ತಿಳಿಸಿದರು.