ಹೊಸದಿಗಂತ ವರದಿ ಕಲಬುರಗಿ:
ಸದನದಲ್ಲಿ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಸಚಿವ ಕೃಷ್ಣ ಭೈರೇಗೌಡ ಅವರು ನಾನು ಹಣ ಪಡೆದು ಕೆಲಸ ಕೊಟ್ಟಿರುವುದಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತ ಮಟ್ಟದ ತನಿಖೆ ಆಗಬೇಕು.ಈ ತನಿಖೆ ಮುಗಿಯುವವರೆಗೆ ನಾನು ಸದನಕ್ಕೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಚಾರವಾಗಿ ನಾನು ಪ್ರತಿಭಟನೆ ಮಾಡಿದ್ದೆ.ಆದರೆ,ಯಾರೊಬ್ಬ ಶಾಸಕರಾಗಲಿ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ.ನಮ್ಮ ಜಿಲ್ಲೆಯ ಶಾಸಕರೆ ನನ್ನ ಬೆಂಬಲಕ್ಕೆ ನಿಂತಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಯಶವಂತರಾಯ ಪಾಟೀಲ್ ಮಾತ್ರ ನನ್ನ ಬೆಂಬಲಕ್ಕೆ ನಿಂತಿದ್ದರು ಎಂದರು.
ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಷಯ ನಾನು ಪ್ರಸ್ತಾವನೆ ಮಾಡಿರಲಿಲ್ಲ.ಇದೀಗ ನಾನು ಮತ್ತೆ ಪತ್ರ ಬರೆದಿದ್ದೇನೆ.ನಾನು ನನ್ನ ಜೀವಮಾನದಲ್ಲಿ ಸ್ವಾಭಿಮಾನದಿಂದ ಬದುಕಿದವನು, ಇಲ್ಲದಿದ್ದರೆ ನಾನು ಸತ್ತಂತೆ ಎಂದು ತಮ್ಮ ಆಕ್ರೋಶ ಹೊರ ಹಾಕಿದರು.
ನನ್ನ ಮೇಲೆ ಸಚಿವ ಕೃಷ್ಣ ಭೈರೇಗೌಡ ಅವರು ಮಾಡಿರುವ ಆರೋಪದ ತನಿಖೆಯಾಗಬೇಕು.ತನಿಖೆ ಮುಗಿಯುವವರೆಗೆ ನಾನು ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗುವುದಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದಲೆ ಈ ಬಾರಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಕೃಷ್ಣ ಭೈರೇಗೌಡರನ್ನು ಮತ್ತು ಅಧಿಕಾರಿಗಳನ್ನು ಕರೆಯಿಸಿ,ಈ ಬಗ್ಗೆ ತನಿಖೆ ಮಾಡಬೇಕು.ಈ ಮೂಲಕ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಬಿ.ಆರ್.ಪಾಟೀಲ್ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ.
ನಾನು ಇಷ್ಟು ದಿನ ಎಲ್ಲಾ ರೀತಿಯ ಅವಮಾನಗಳನ್ನು ಸಹಿಸಿಕೊಂಡು ಬಂದಿದ್ದೇನೆ.ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಧಾನ ಸಭೆ ಕರೆದಿದ್ದು, ಸಭೆಯಲ್ಲಿ ನಾನು ಸಹ ಹಾಜರಾಗುತ್ತೇನೆ ಎಂದು ಹೇಳಿದರು.