ಹೊಸದಿಗಂತ ವರದಿ, ಮಂಗಳೂರು:
ಸರಕಾರ ಎಸ್ಡಿಪಿಐ ಮತ್ತು ಪಿಎಫ್ಐ ಬ್ಯಾನ್ ಮಾಡುವುದಾದರೆ ಮಾಡಲಿ. ಯಾರು ಬೇಡ ಅಂತಾರೆ? ಕೇಂದ್ರ ಮತ್ತು ರಾಜ್ಯ ಸರಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಬಿಜೆಪಿ ಕೈಯಲ್ಲೇ ಇದೆ. ನಾವು ಬ್ಯಾನ್ ಮಾಡೋದು ಬೇಡ ಅಂತ ಹೇಳಿದ್ದೇವಾ? ಮಾಡುವುದಾದರೆ ಮಾಡಲಿ ಎಂದರು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರುವ ವಿಚಾರ 10-15 ದಿನಗಳ ಹಿಂದೆಯೇ ತಿಳಿದಿತ್ತು. ಭಾರತದ, ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿರೆ ಎಂಬುದೂ ಸರ್ಕಾರಕ್ಕೆ ಗೊತ್ತಿತ್ತು. ಆಗಲೇ ಆ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ, ರಾಜ್ಯ ಸರ್ಕಾರ ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೆ ಇದ್ದದ್ದು ಬೇಜವಾಬ್ದಾರಿತನ ಎಂದವರು ಹೇಳಿದರು.
ಈಗ ಉಕ್ರೇನ್ನಲ್ಲಿ ನಮ್ಮ ವಿದ್ಯಾರ್ಥಿಗಳು ಬಂಕರ್ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಸಿಲುಕಿದ್ದಾರೆ. ವಿದ್ಯಾರ್ಥಿಗಳಿರುವ ಪಕ್ಕದಲ್ಲಿಯೇ ಬಾಂಬ್ಗಳು ಸೋಟಿಸುತ್ತಿವೆ. ಈಗ ವಿಮಾನ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮರಳಿ ತಾಯ್ನಾಡಿಗೆ ಬರಲು ಸಮಸ್ಯೆಯಾಗಿದೆ. ಸರ್ಕಾರ ಇಂತಹ ವಿಚಾರಗಳಲ್ಲಿ ಮೈಮರೆಯಬಾರದು. ಸಿಎಂ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಮೂಲಕ ಮಾತುಕತೆ ನಡೆಸಬೇಕು. ತಕ್ಷಣ ರಾಜ್ಯದ ಎಲ್ಲ ವಿದ್ಯಾರ್ಥಿಗಳನ್ನು ಅವರ ಪ್ರಯಾಣ ವೆಚ್ಚ ಭರಿಸಿ ತಾಯ್ನಾಡಿಗೆ ಕರೆ ತರುವ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.