ಹೊಸದಿಗಂತ ವರದಿ,ಬಳ್ಳಾರಿ:
ನಗರದ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 19.100 ಕೆ.ಜಿ.ಗಾoಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ರಾಣಿತೋಟ ಪ್ರದೇಶದ ಬೀರಪ್ಪ ದೇಗುಲ ಬಳಿಯ ನಿವಾಸಿ ವಾಹೀದ್ ಹಾಗೂ ರೂಪನಗುಡಿ ರಸ್ತೆಯ ವಾಲ್ಮೀಕಿ ಬೀದಿಯಲ್ಲಿ ಮಾರೆಮ್ಮ ದೇಗುಲ ಎದುರುಗಡೆಯ ನಿವಾಸಿ ಚಾಂದ್ಭಾಷಾ ಆರೋಪಿಗಳನ್ನು ಬಂಧಿಸಿ 19.10 ಲಕ್ಷ ಬೆಲೆ ಬಾಳುವ 19 ಕೆಜಿ 100 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದರು.
ಸೈಬರ್ ಪೊಲೀಸ್ ಠಾಣೆಯ ಡಿಎಸ್ಪಿ ಡಾ.ಸಂತೋಷ ಚೌವ್ಹಾಣ ಅವರ ಖಚಿತ ಮಾಹಿತಿಯೊಂದಿಗೆ ಪೊಲೀಸ್ ಇನ್ಸ್ಪೆಕ್ಟರ್ ರಮಾಕಾಂತ್ ವೈ.ಏಚ್, ಪಿಎಸ್ಐ ವಲಿಭಾಷ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಪ್ರಕರಣಕ್ಕೆ ಸಂಭಂಧಿಸಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ ಗಾಂಜಾ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ಆರೋಪಿಗಳನ್ನು ಬಂಧಿಸಿದ್ದು, 13 ಪ್ರಕರಣ ದಾಖಲಿಸಲಾಗಿದೆ. ಇಲ್ಲಿವರೆಗೆ ಒಟ್ಟು 75 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು. ಇತ್ತೀಚೆಗೆ ರೂಪನಗುಡಿ ರಸ್ತೆಯಲ್ಲಿ ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳು ಪ್ರಕರಣದಲ್ಲಿ ಸಿಲುಕಿದ್ದರು, ಮುಲಾಜಿಲ್ಲದೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಗಾಂಜಾ ಮತ್ತು ಎನ್ಡಿಪಿಎಸ್ ಆಕ್ಟ್ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿವಿಧೆಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಗಾಂಜಾ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನಂತರ ಕಾರ್ಯಾಚರಣೆ ನಡೆಸಿದ ತಂಡದ ಸದಸ್ಯರಿಗೆ ಎಸ್ಪಿ ರಂಜೀರ್ ಕುಮಾರ್ ಬಂಡಾರು ಅವರು ಶ್ಲಾಘಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಸೈಬರ್ ಪೊಲೀಸ್ ಠಾಣೆಯ ಡಿಎಸ್ಪಿ ಡಾ.ಸಂತೋಷ ಚೌವ್ಹಾಣ ಸೇರಿದಂತೆ ಇತರರು ಇದ್ದರು.