ಹೊಸದಿಗಂತ ವರದಿ, ಹಾಸನ:
ಜಿಲ್ಲೆಯಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್ ನ ಟವರ್ ಗೆ ಪ್ರಾಮುಖ್ಯತೆ ನೀಡಲಾಗಿದ್ದು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ೧೧ ಟವರ್ ಕೆಲಸ ನಡೆಯುತ್ತಿದೆ ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಭಾರತ್ ಸಂಚಾರ ನಿಗಮ ಲಿಮಿಟೆಡ್ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿ. ಎಸ್. ಎನ್. ಎಲ್ ನೆಟ್ ವರ್ಕ್ ಬೇಕು ಎಂದು ಗ್ರಾಮದ ಜನರಿಂದ ಬೇಡಿಕೆ ಬಂದಿದೆ. ಈ ನಿಟ್ಟಿನಲ್ಲಿ ಈಗ ಇರುವ ೨g ಹಾಗೂ ೩g ನೆಟ್ ವರ್ಕ್ ಗಳನ್ನು ನಿರ್ಭರ ಯೋಜನೆಯಡಿಯಲ್ಲಿ ೪g ಯಾಗಿ ಪರಿವರ್ತನೆಗಾಗಿ ೧೯೪ ಟವರ್ ಗಳಲ್ಲಿ ಕೆಲಸ ನಡೆಯುತ್ತಿದೆ ಉಳಿದ ೧೦೬ ಟವರ್ ಗಳನ್ನು ಮುಂದಿನ ಹಂತದಲ್ಲಿ ಕ್ಯೆಗೆತ್ತಿ ಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಜಿಲ್ಲೆಯಲ್ಲಿ ಅಳವಡಿಸಿರುವ ಒಟ್ಟು ಟವರ್ ಹಾಗೂ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಮಾಹಿತಿ ಕಲೆ ಹಾಕಿದರು. ಹಾಸನ ಜಿಲ್ಲೆಯಲ್ಲಿ ಹೆಚ್ಚುವರಿ ೪ಜಿ ಟವರ್ ಗಳನ್ನು ಸ್ಥಾಪಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ ಅವರು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿ. ಎಸ್. ಎನ್. ಎಲ್ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ತಮ್ಮ ಕಾರ್ಯ ವೈಖರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಟವರ್ ಅಳವಡಿಕೆಗೆ ಜಾಗದ ಸಮಸ್ಯೆ ಹಾಗೂ ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಗೊಂದಲ ಇದ್ದಲ್ಲಿ ತನ್ನ ಗಮನಕ್ಕೆ ತಂದು ಕಾರ್ಯ ನಿರ್ವಹಿಸಬೇಕು. ಇಡೀ ರಾಜ್ಯದಲ್ಲಿ ೧೭ ಪೋಸ್ಟ್ ಆಫೀಸ್ ಗಳ ಸ್ಥಾಪನೆಗೆ ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ ಹಾಸನ ಜಿಲ್ಲೆಗೆ ೨ ಪೋಸ್ಟ್ ಆಫೀಸ್ ನಿರ್ಮಾಣಕ್ಕೆ ಭಾರತ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಹೆಚ್. ಡಿ. ರೇವಣ್ಣ ಅವರು ಮಾತನಾಡಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಾಗತಿಹಳ್ಳಿ, ಬ್ಯಾಡರಹಳ್ಳಿ ಗೇಟ್, ಬೂಕನಬೆಟ್ಟ ಗ್ರಾಮದ ಕ್ರಾಸ್, ಮಾದಿಹಳ್ಳಿ, ಗೌಡಗೆರೆ ಗ್ರಾಮದ ಕ್ರಾಸ್, ಮಲ್ಲವನಘಟ್ಟ ಗ್ರಾಮದ ಕ್ರಾಸ್, ಜೋಗಿಪುರ ಗ್ರಾಮದ ಕ್ರಾಸ್, ಚಿಕ್ಕಗುಂಡೆನಹಳ್ಲಿ, ದೊಡ್ಡ ಮತ್ತಿಘಟ್ಟ ಮತ್ತು ಗುಲಸಿಂದ, ಕತ್ರಿಘಟ್ಟ ಗೇಟ್ ಮತ್ತು ಚೌಡೇನಹಳ್ಳಿ, ಮಳಲಿ ಕ್ರಾಸ್ ಶಾಂತಿಗ್ರಾಮ ಟೋಲ್ ಹತ್ತಿರ, ತ್ಯಾವೆಹಳ್ಳಿ ಮತ್ತು ಜಿ ಮೈನಹಳ್ಳಿ ನಡುವಿನ ಕೆ.ಇ.ಬಿ ಸಬ್ ಸ್ಟೇಷನ್ ಬಳಿ ಸೇರಿದಂತೆ ಒಟ್ಟು ೧೨ ಪ್ಲೆ ಓವರ್ ನಿರ್ಮಾಣಕ್ಕೆ ೪೨೮ ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.