ಹೊಸದಿಗಂತ, ವಿಜಯಪುರ:
ರಾಜ್ಯಸಭಾ ಚುನಾವಣೆಯಲ್ಲಿ ಬಹಿರಂಗ ಮತದಾನ ಇದ್ದು, ಅಡ್ಡ ಮತದಾನವಾಗಲ್ಲ. ಮತದಾನ ಮಾಡಿದ್ದನ್ನು ತೋರಿಸಲಾಗುತ್ತದೆ. ಹಾಗೊಂದು ವೇಳೆ ಅಡ್ಡ ಮತದಾನ ಮಾಡಿದರೆ ಶಾಸಕತ್ವ ರದ್ದಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರ ಹೊರ ವಲಯದ ಭೂತನಾಳ ಕೆರೆಗೆ ಭಾನುವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಥ ಸಾಹಸಕ್ಕೆ ಯಾರೂ ಕೈ ಹಾಕಲ್ಲ. ಅದಕ್ಕೂ ತಾಕತ್ ಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಕಮ್ಯುನಲ್ ಮತ್ತು ಕ್ರಿಮಿನಲ್ ಪಕ್ಷ ಎಂಬ ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದಕ್ಕೆ ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ದಾರೆಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಕುರಿತು, ಶೋಭಕ್ಕ ಅದೇ ಗುಂಗಲ್ಲಿರುತ್ತಾರೆ. ಜನ ನಮಗೆ 135 ಸೀಟ್ ಕೊಟ್ಟಿದ್ದಾರೆ. ಆಪರೇಶನ್ ಕಮಲ ಮಾಡುತ್ತೆನೆಂದರೂ ಕನಿಷ್ಠ 50 ಜನ ಶಾಸಕರು ಹೋಗಬೇಕು. ಈ ಮೂಲಕ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಅಬಾಧಿತ ಎಂದರು.
ಇನ್ನು ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಕ್ಷೇತ್ರದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆಂದು ಟಾಂಗ್ ನೀಡಿದರು.