ಅಭಿವೃದ್ಧಿ ಹಾದಿಯಲ್ಲಿ ಈಶಾನ್ಯ ರಾಜ್ಯಗಳೀಗ ನಿಜಕ್ಕೂ ‘ಅಷ್ಟಲಕ್ಷ್ಮೀ’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿ.ಕಿಶನ್ ರೆಡ್ಡಿ
ಭಾರತ ಸರ್ಕಾರದ ಈಶಾನ್ಯ ವಲಯ ಅಭಿವೃದ್ಧಿ ಖಾತೆ ಸಚಿವರು

ನಾನು ಪ್ರತಿ ಬಾರಿ ಈಶಾನ್ಯ ಪ್ರದೇಶಕ್ಕೆ ಪ್ರಯಾಣಿಸುವಾಗಲೂ ಗತದ ನೆನಪುಗಳಿಗೆ ಜಾರುತ್ತೇನೆ. ಭಾರತದಾದ್ಯಂತದ ನನ್ನ ಸಹ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ನನ್ನ ಹಿಂದಿನ ಭೇಟಿಗಳನ್ನು ನೆನಪಿಸಿಕೊಳ್ಳುತ್ತೇನೆ. ಆ ದಿನಗಳಲ್ಲಿ ಇದ್ದ ಸಂಪರ್ಕದ ಕೊರತೆ, ಹೆಚ್ಚುತ್ತಿರುವ ಭದ್ರತಾ ಅಪಾಯ, ಬಂದ್‌ಗಳು ಹಾಗೂ ರಸ್ತೆತಡೆಗಳ ಅನಾನುಕೂಲತೆ, ಮೂಲಸೌಕರ್ಯಗಳ ಅನುಪಸ್ಥಿತಿಯ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಳ್ಳದೆ, ಈ ಪ್ರದೇಶದ ನಮ್ಮ ಸಹೋದರ-ಸಹೋದರಿಯರೊಂದಿಗೆ ಸಂವಹನ ನಡೆಸುವ, ಅವರ ಸಂಸ್ಕೃತಿಯನ್ನು ಅನುಭವಿಸುವ ಹಾಗೂ ಸವಾಲುಗಳು ಮತ್ತು ಪರಿಹಾರಗಳನ್ನು ಚರ್ಚಿಸುವ ಅವಕಾಶವನ್ನು ನಾವು ಅಮೂಲ್ಯವೆಂದು ಪರಿಗಣಿಸುತ್ತಿದ್ದೆವು.

ಆದರೆ ಈ ಭಾಗದಲ್ಲಿ ಬದಲಾವಣೆಯನ್ನು ಆರಂಭಿಸುವ ನಮ್ಮ ಉತ್ಸಾಹ ಹಾಗೂ ಸತತ ಪ್ರಯತ್ನಗಳಿಗೆ ರಾಜಕೀಯ ನಿರ್ಲಕ್ಷ್ಯ, ಸ್ಪಷ್ಟ ಅನ್ಯಾಯಗಳು ಮತ್ತು ಭಾರತದ ಇತರ ಭಾಗಗಳಿಂದ ಸಂಪರ್ಕ ಕಡಿತದಿಂದಾಗಿ ಗಂಭೀರ ಅಡೆತಡೆಗಳು ಎದುರಾದವು.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಮನ್ನಣೆ

ದುರದೃಷ್ಟವಶಾತ್ ನಮ್ಮ ರಾಷ್ಟ್ರದ ಅವಿಭಾಜ್ಯ ಅಂಗವಾದ ಈಶಾನ್ಯ ರಾಜ್ಯಗಳನ್ನು ಹೆಚ್ಚಾಗಿ “ಮಲ ಸಹೋದರಿಯರು” ಎಂದು ಕರೆಯಲಾಗುತ್ತಿತ್ತು. ಆದರೆ, ಕೆಲವು ವರ್ಷಗಳ ನಂತರ, ಇಂದು ನಾನು ಇದೇ ಸ್ಥಳಗಳಿಗೆ ಭೇಟಿ ನೀಡಿದಾಗ, ನನ್ನಲ್ಲಿ ಆಳವಾದ ತೃಪ್ತಿ ಮತ್ತು ಸಮಾಧಾನ ಮೂಡುತ್ತದೆ. ನಮ್ಮ ಈಶಾನ್ಯ ರಾಜ್ಯಗಳು ಅಥವಾ ಇನ್ನೂ ಸೂಕ್ತವಾಗಿ ಹೇಳುವುದಾದರೆ “ಅಷ್ಟಲಕ್ಷ್ಮಿಯರು” ಕೊನೆಗೂ ನ್ಯಾಯಯುತವಾಗಿ ಅರ್ಹ ಗಮನ ಮತ್ತು ಬೆಂಬಲವನ್ನು ಪಡೆಯುತ್ತಿವೆ. ಒಂಬತ್ತು ವರ್ಷಗಳ ಹಿಂದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಭಾರತದ ಈಶಾನ್ಯ ಪ್ರದೇಶವು ಅಭಿವೃದ್ಧಿ ಹೊಂದದ ಹೊರತು ಭಾರತವು ಪ್ರಗತಿ ಹೊಂದಲು ಸಾಧ್ಯವಿಲ್ಲ,” ಎಂದು ನಿಸ್ಸಂದಿಗ್ಧವಾಗಿ ಘೋಷಿಸಿದರು. ಆ ದೂರದೃಷ್ಟಿಯ ನಂಬಿಕೆಯೊಂದಿಗೆ ಕಳೆದ 9 ವರ್ಷಗಳಲ್ಲಿ ಕೈಗೊಂಡ ಕಾರ್ಯತಂತ್ರದ ಉಪಕ್ರಮಗಳು ಭವಿಷ್ಯದಲ್ಲಿ ಅಡೆತಡೆಯಿಲ್ಲದ ಅಭಿವೃದ್ಧಿಗೆ ಅನುವು ಮಾಡಿಕೊಡಲು ದೃಢವಾದ ಅಡಿಪಾಯವನ್ನು ಸ್ಥಾಪಿಸಿವೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆರ್ಥಿಕ ಬೆಂಬಲ

ಕಳೆದ ಒಂಬತ್ತೂವರೆ ವರ್ಷಗಳಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡುವ ಮೂಲಕ ಭಾರತ ಸರ್ಕಾರವು ಈ ಪ್ರದೇಶದ ಅಭಿವೃದ್ಧಿಗೆ ಭಾರಿ ಆರ್ಥಿಕ ಉತ್ತೇಜನ ನೀಡಿದೆ. 2014 ಮತ್ತು 2023ರ ನಡುವೆ ಈಶಾನ್ಯ ಪ್ರದೇಶಕ್ಕೆ (ಎನ್‌ಇಆರ್‌) 54 ಕೇಂದ್ರ ಸಚಿವಾಲಯಗಳ ಒಟ್ಟು ಬಜೆಟ್ ಹಂಚಿಕೆಯಲ್ಲಿ ಸುಮಾರು 233% ಹೆಚ್ಚಳವಾಗಿದೆ. ಹೊಸದಾಗಿ ಮಂಜೂರಾದ 6,600 ಕೋಟಿ ರೂ.ಗಳ ʻಪಿಎಂ-ಡಿವೈನ್ ಯೋಜನೆʼಯು ಈಶಾನ್ಯದ ಜನರಿಗೆ ಜೀವನೋಪಾಯ ಮತ್ತು ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುತ್ತದೆ. ವಿವೇಚನಾಯುತ ಮತ್ತು ಉದ್ದೇಶಿತ ಹೂಡಿಕೆಯ ಜೊತೆಗೆ ಆರ್ಥಿಕ ಉತ್ತೇಜನವು, ಈ ಪ್ರದೇಶವು ಎದುರಿಸುತ್ತಿರುವ ಸಂಪರ್ಕ ಕೊರತೆ ಹಾಗೂ ಮೂಲಸೌಕರ್ಯ ಕೊರತೆಯಂತಹ ಅತಿದೊಡ್ಡ ಸವಾಲುಗಳನ್ನು ಎದುರಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿತು.

ರೈಲು, ರಸ್ತೆ ಮಾರ್ಗಗಳ ಅಭಿವೃದ್ಧಿ

2003ರಿಂದ ಸ್ಥಗಿತಗೊಂಡಿದ್ದ ಭಾರತದ ಅತಿ ಉದ್ದದ ನೀರಿನ ಸೇತುವೆ ʻಭೂಪೇನ್ ಹಜಾರಿಕಾ ಸೇತುʼವನ್ನು ಮೇ 2017ರಲ್ಲಿ ಉದ್ಘಾಟಿಸಲಾಯಿತು. ಇದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆಗಳಿಂದ 1 ಗಂಟೆಗೆ ಇಳಿಸಿದೆ. ಡಿಸೆಂಬರ್ 25, 2018 ರಂದು ಉದ್ಘಾಟಿಸಲಾದ ಭಾರತದ ಅತಿ ಉದ್ದದ ರೈಲು ಸೇತುವೆ ʻಬೋಗಿಬೀಲ್ʼ, ದೆಹಲಿ ಮತ್ತು ದಿಬ್ರುಗಢ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಳಷ್ಟು ಕಡಿಮೆ ಮಾಡಿದೆ. ಕುತೂಹಲಕಾರಿ ಸಂಗತಿಯೆಂದರೆ, 2002ರಲ್ಲಿ ಭಾರತ ರತ್ನ ಅಟಲ್ ಜೀ ಅವರ ಅಧಿಕಾರಾವಧಿಯಲ್ಲಿ ಸೇತುವೆಯ ಕೆಲಸ ಪ್ರಾರಂಭವಾಯಿತು. ಆದರೆ 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಸ್ಥಗಿತಗೊಂಡಿತು. ಮತ್ತೆ ಕಾಮಗಾರಿ ವೇಗ ಪಡೆದುಕೊಂಡಿದ್ದು 2014ರಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಾಗಲೇ.

ಅಂತೆಯೇ 2014ಕ್ಕೆ ಮೊದಲು ಗುವಾಹಟಿಗೆ ಮಾತ್ರ ರೈಲು ಸಂಪರ್ಕ ಸೀಮಿತವಾಗಿತ್ತು. ಆದರೆ ಇಂದು ʻರಾಜಧಾನಿ ಸಂಪರ್ಕʼ ಯೋಜನೆಯಡಿ ಅರುಣಾಚಲ, ತ್ರಿಪುರಾ ಮತ್ತು ಮಣಿಪುರವನ್ನು ರೈಲು ಮಾರ್ಗದ ಮೂಲಕ ಸಂಪರ್ಕಿಸಲಾಗಿದೆ. ಉಳಿದ 5 ರಾಜ್ಯಗಳ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಉದಾಹರಣೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ನಾವು ಭೌಗೋಳಿಕ ಪ್ರದೇಶದ ನಿರ್ಬಂಧಗಳನ್ನು ಮೀರುತ್ತಿದ್ದೇವೆ; ಈಶಾನ್ಯದಲ್ಲಿ ನಾವು ವಿಶ್ವ ದಾಖಲೆಯನ್ನು ಮುರಿದಿದ್ದೇವೆ ಮತ್ತು ಜಿರಿಬಾಮ್-ಇಂಫಾಲ್ ರೈಲು ಮಾರ್ಗದಲ್ಲಿ ವಿಶ್ವದ ಅತಿ ಎತ್ತರದ ಕಮಾನಿನ ಕಂಬದ ಸೇತುವೆಯನ್ನು ನಿರ್ಮಿಸಿದ್ದೇವೆ.

ವಾಯು ಸಂಪರ್ಕ ಅಭಿವೃದ್ಧಿ

ಇದಲ್ಲದೆ ಪ್ರವಾಸೋದ್ಯಮ ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ಭಾರಿ ಉತ್ತೇಜನ ನೀಡುವ ಮೂಲಕ ಕಳೆದ 9 ವರ್ಷಗಳಲ್ಲಿ ವಾಯು ಸಂಪರ್ಕವು ಸಾಕಷ್ಟು ಸುಧಾರಿಸಿದೆ. 2014ರಲ್ಲಿ ಕೇವಲ 9 ವಿಮಾನ ನಿಲ್ದಾಣಗಳಿದ್ದವು. ಇಂದು ನಾವು ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 17ಕ್ಕೆ ಹೆಚ್ಚಿಸಿದ್ದೇವೆ. ಅರುಣಾಚಲ ಪ್ರದೇಶದ ಮೊದಲ ʻಗ್ರೀನ್ ಫೀಲ್ಡ್ʼ ವಿಮಾನ ನಿಲ್ದಾಣವೆನಿಸಿದ ಡೋನಿ ಪೋಲೊ ವಿಮಾನ ನಿಲ್ದಾಣ ಅಥವಾ 2022ರಲ್ಲಿ ಪ್ರಧಾನಿಯವರು ಉದ್ಘಾಟಿಸಿದ ಅಗರ್ತಲಾದ ʻಮಹಾರಾಜ ಬೀರ್ ಬಿಕ್ರಮ್ʼ (ಎಂಬಿಬಿ) ವಿಮಾನ ನಿಲ್ದಾಣದ ಅತ್ಯಾಧುನಿಕ ಸಂಯೋಜಿತ ಟರ್ಮಿನಲ್ ವಾಯು ಸಂಪರ್ಕದಲ್ಲಿ ತ್ವರಿತ ಪ್ರಗತಿಯ ಉಜ್ವಲ ಉದಾಹರಣೆಗಳಾಗಿವೆ.

ಜಲಮಾರ್ಗಗಳ ಅಭಿವೃದ್ಧಿ

ಈಶಾನ್ಯದಲ್ಲಿ ಅಭಿವೃದ್ಧಿ ಕೊರತೆ ಅನಿವಾರ್ಯ ಎಂಬ ದೀರ್ಘಕಾಲದ ನೆಪವನ್ನು ಹಿಂದಿನ ಸರ್ಕಾರಗಳು ಹೊಂದಿದ್ದವು. ಆದರೆ ನರೇಂದ್ರ ಮೋದಿ ಸರ್ಕಾರವು ಈ ಪ್ರದೇಶದ ಜಲಮಾರ್ಗಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 2014ಕ್ಕೆ ಮೊದಲು ಕೇವಲ 1 ರಾಷ್ಟ್ರೀಯ ಜಲಮಾರ್ಗವಿತ್ತು ಮತ್ತು ಈಗ ಈಶಾನ್ಯ ಪ್ರದೇಶದಲ್ಲಿ 20 ರಾಷ್ಟ್ರೀಯ ಜಲಮಾರ್ಗಗಳಿವೆ. ಇದು ಬ್ರಹ್ಮಪುತ್ರ ಮತ್ತು ಬರಾಕ್ ನದಿಯ ಅಪಾರ ನೌಕಾಯಾನ ಸಾಮರ್ಥ್ಯವನ್ನು ಅನಾವರಣಗೊಳಿಸಿದೆ.

ಆಗ್ನೇಯ ಏಷ್ಯಾದೊಂದಿಗೆ ನಿಕಟ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಸೆಯುತ್ತಿರುವ ಈಶಾನ್ಯ ಪ್ರದೇಶವನ್ನು ʻಆಕ್ಟ್ ಈಸ್ಟ್ ನೀತಿʼಯ ಕೇಂದ್ರ ಬಿಂದುವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮ್ಯಾನ್ಮಾರ್‌ನೊಂದಿಗೆ 2,904 ಕೋಟಿ ರೂ.ಗಳ ʻಕಲಾದನ್ ಮಲ್ಟಿಮೋಡಲ್ ಯೋಜನೆʼ, ಬಾಂಗ್ಲಾದೇಶದೊಂದಿಗಿನ 1,100 ಕೋಟಿ ರೂ.ಗಳ ʻಅಗರ್ತಲಾ-ಅಖೌರಾ ರೈಲ್ವೆ ಯೋಜನೆʼ, 1,548 ಕೋಟಿ ರೂ.ಗಳ ʻಭಾರತ-ಮ್ಯಾನ್ಮಾರ್-ಥೈಲ್ಯಾಂಡ್-ತ್ರಿಪಕ್ಷೀಯ ಹೆದ್ದಾರಿʼ ಯೋಜನೆ – ಇವು ಈಶಾನ್ಯವನ್ನು ಭಾರತದ ‘ನೆರೆಹೊರೆಯವರಿಗೆ ಮೊದಲು’ ಮತ್ತು ‘ಆಕ್ಟ್ ಈಸ್ಟ್ ಪಾಲಿಸಿ’ಯ ಕೇಂದ್ರಬಿಂದುವಾಗಿರಿಸುವ ಪ್ರಮುಖ ಯೋಜನೆಗಳಾಗಿವೆ. 1972ರ ನಂತರ ಮೊದಲ ಬಾರಿಗೆ 2015ರಲ್ಲಿ ಒಳನಾಡಿನ ಜಲ ಸಾರಿಗೆ ಮತ್ತು ವ್ಯಾಪಾರದ ಬಗ್ಗೆ ಭಾರತ ಬಾಂಗ್ಲಾದೇಶ ನಡುವಿನ ಶಿಷ್ಟಾಚಾರ ನವೀಕರಣ ಮಾಡಲಾಗಿದೆ. ಬಾಂಗ್ಲಾದೇಶದ ಛಟೋಗ್ರಾಮ್ ಮತ್ತು ಮೊಂಗ್ಲಾ ಬಂದರುಗಳ ಬಳಕೆಗೆ ಅನುಮತಿ ದೊರೆತಿದೆ. ಇವು ʻಆಕ್ಟ್ ಈಸ್ಟ್ʼ ನೀತಿಯ ಗಮನಾರ್ಹ ಸಾಧನೆಗಳಾಗಿವೆ.

ಶಾಂತಿ ಮತ್ತು ಸ್ಥಿರತೆಗೆ ಹೆಚ್ಚು ಉತ್ತೇಜನ

ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನಿರಂತರ ಪ್ರಯತ್ನಗಳು ಮುಂದುವರಿದಿವೆ. 2014 ಮತ್ತು 2022ರ ನಡುವೆ ಬಂಡಾಯವು 76% ರಷ್ಟು ಕಡಿಮೆಯಾಗಿದೆ. ಭದ್ರತಾ ಪಡೆಗಳ ಸಾವು-ನೋವುಗಳು ಮತ್ತು ನಾಗರಿಕರ ಸಾವುಗಳಲ್ಲಿ 90% ರಷ್ಟು ಕಡಿಮೆಯಾಗಿದೆ. ಅಂದಿನಿಂದ 8,000ಕ್ಕೂ ಹೆಚ್ಚು ಉಗ್ರರು ಶರಣಾಗಿದ್ದಾರೆ. ʻಎಎಫ್ಎಸ್‌ಪಿಎʼಯ ಪರಿಧಿಯಲ್ಲಿ 75% ಕಡಿತ ಕಂಡುಬಂದಿದೆ. ಶಾಶ್ವತ ಪರಿಹಾರಗಳತ್ತ ಸಾಗುತ್ತಿರುವ ಬಂಡುಕೋರ ಗುಂಪುಗಳೊಂದಿಗೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಜೊತೆಗೆ ಅವರು ಮುಖ್ಯವಾಹಿನಿಗೆ ಸೇರಲು ಸಹಾಯ ಮಾಡಲು ಪುನರ್ವಸತಿ ಪ್ಯಾಕೇಜ್‌ಗಳನ್ನು ಒದಗಿಸಲಾಗಿದೆ.

ಈಶಾನ್ಯ ವಲಯದಲ್ಲಿ ಅಭಿವೃದ್ಧಿ ಮತ್ತು ಶಾಂತಿಗೆ ಹೆಚ್ಚಿನ ಆದ್ಯತೆ ನೀಡಿದ ಪ್ರಧಾನಮಂತ್ರಿಯವರು ಕಳೆದ 9.5 ವರ್ಷಗಳಲ್ಲಿ ಈಶಾನ್ಯ ಪ್ರದೇಶಕ್ಕೆ 60ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಈಶಾನ್ಯ ಪ್ರದೇಶದಲ್ಲಿ ಅಭಿವೃದ್ಧಿಯ ಉದಯವನ್ನು ತರುವ ರಾಜಕೀಯ ಇಚ್ಛಾಶಕ್ತಿ ಹಾಗೂ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ. ಬದ್ಧತೆ, ಸ್ಥಿತಿಸ್ಥಾಪಕತ್ವ ಮತ್ತು ಸಬಲೀಕರಣವನ್ನು ಕೇಂದ್ರವಾಗಿಟ್ಟುಕೊಂಡು ಈಶಾನ್ಯವು ಈಗ ʻಅಮೃತ ಕಾಲʼದ ಹೊಸ್ತಿಲಲ್ಲಿ ನಿಂತಿದೆ. ಕಳೆದ 9 ವರ್ಷಗಳು ನಿರ್ಣಾಯಕವಾಗಿವೆ. ಮುಂದಿನ 25 ವರ್ಷಗಳು ʻಈಶಾನ್ಯ ಭಾರತʼ ಎಂದು ಕರೆಯಲ್ಪಡುವ ಭೂಮಿಯ ಮೇಲಿನ ಸ್ವರ್ಗದ ಜಾದುವನ್ನು ಅನಾವರಣಗೊಳಿಸಲಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!