January15, 2026
Thursday, January 15, 2026
spot_img

ಸಂಸತ್ತಿನಲ್ಲಿ ಕಾಂಗ್ರೆಸ್‌ ಸಂಸದರ ಮಧ್ಯೆ ಭಾರತ-ಆಫ್ರಿಕಾ ಮ್ಯಾಚ್ ಕಿತ್ತಾಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನಲ್ಲಿ ಇಂದು ಉತ್ತರ ಭಾರತದಲ್ಲಿ ಚಳಿಗಾಲದ ಗರಿಷ್ಠ ಅವಧಿಯಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಿಗದಿಪಡಿಸುವ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ನಡುವೆ ತೀವ್ರ ವಾಗ್ವಾದ ನಡೆಯಿತು.

ಬುಧವಾರ ಲಕ್ನೋದಲ್ಲಿ ನಡೆಯಬೇಕಿದ್ದ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 4ನೇ ಟಿ20ಐ ಪಂದ್ಯವನ್ನು ಅತಿಯಾದ ಮಂಜು ಕಾರಣ ಟಾಸ್ ಇಲ್ಲದೆ ರದ್ದುಗೊಳಿಸಿದ ನಂತರ ಈ ಚರ್ಚೆ ನಡೆಯಿತು.

ಡಿಸೆಂಬರ್ ಮತ್ತು ಜನವರಿಯಲ್ಲಿ ಪಂದ್ಯಗಳನ್ನು ನಿಗದಿಪಡಿಸುವಾಗ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಶುಕ್ಲಾ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ತರೂರ್ ಜನವರಿ ಪಂದ್ಯಗಳನ್ನು ಕೇರಳಕ್ಕೆ ಸ್ಥಳಾಂತರಿಸಬೇಕೆಂದು ಸೂಚಿಸಿದರು. ಕೇರಳದಲ್ಲಿ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಿವೆ ಎಂದರು.

ಇದಕ್ಕೆ ಉತ್ತರಿಸಿದ ಶುಕ್ಲಾ, ಪಂದ್ಯಗಳು ಯಾವುದೇ ಪ್ರದೇಶಕ್ಕೆ ನಿರ್ದಿಷ್ಟವಲ್ಲ ಮತ್ತು ಕೇರಳವು ಈಗಾಗಲೇ ಬಿಸಿಸಿಐನ ಆವರ್ತನ ನೀತಿಯಡಿಯಲ್ಲಿ ಪಂದ್ಯಗಳನ್ನು ಆಯೋಜಿಸುತ್ತದೆ ಎಂದು ಹೇಳಿದರು.

ಚಳಿಗಾಲದ ಬಗ್ಗೆ ತರೂರ್ ತಮ್ಮ ಅಭಿಪ್ರಾಯವನ್ನು ಮತ್ತೆ ಪುನರುಚ್ಚರಿಸಿದಾಗ, ಶುಕ್ಲಾ, “ನಾವು ಎಲ್ಲಾ ಪಂದ್ಯಗಳನ್ನು ಕೇರಳಕ್ಕೆ ಸ್ಥಳಾಂತರಿಸುತ್ತೇವೆ” ಎಂದು ವ್ಯಂಗ್ಯವಾಡಿದರು.

ಟ್ವಿಟರ್‌ ಎಕ್ಸ್‌ನಲ್ಲಿಯೂ ಪೋಸ್ಟ್‌ ಮಾಡಿರುವ ಶಶಿ ತರೂರ್, “ಲಖನೌದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಆರಂಭವಾಗುವುದನ್ನೇ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ, ಉತ್ತರ ಭಾರತದ ಹೆಚ್ಚಿನ ನಗರಗಳಲ್ಲಿ ವ್ಯಾಪಕವಾದ ದಟ್ಟವಾದ ಮಂಜು ಮತ್ತು ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 411ರಷ್ಟಿತ್ತು. ಕಡಿಮೆ ಗೋಚರತೆ ಕಾರಣಕ್ಕೆ ಪಂದ್ಯ ರದ್ದಾಯಿತು. ಬಿಸಿಸಿಐ ಆಡಳಿತ ಮಂಡಳಿಯವರು ಪಂದ್ಯವನ್ನು ಲಖನೌ ಬದಲು ತಿರುವನಂತಪುರದಲ್ಲಿ ನಿಗದಿಪಡಿಸಬೇಕಾಗಿತ್ತು. ನಮ್ಮಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ 68ರಷ್ಟಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಬಿಸಿಸಿಐ ವಿರುದ್ಧ ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಹಲವು ನಗರಗಳಲ್ಲಿ ಡಿಸೆಂಬರ್‌ ತಿಂಗಳಲ್ಲಿ ದಟ್ಟ ಮಂಜು ಮತ್ತು ವಾಯುಮಾಲಿನ್ಯದ ಸಮಸ್ಯೆ ಇದ್ದೇ ಇರುತ್ತದೆ. ಇದನ್ನೂ ತಿಳಿದಿದ್ದರೂ ಕೂಡ ಈ ತಿಂಗಳಲ್ಲಿ ಇಲ್ಲಿ ಪಂದ್ಯಗಳನ್ನು ಆಯೋಜಿಸಿದ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.

Most Read

error: Content is protected !!