ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತ ನಂತರ, ಟೀಮ್ ಇಂಡಿಯಾ ಈಗ ಎರಡನೇ ಟೆಸ್ಟ್ ಪಂದ್ಯದತ್ತ ತನ್ನ ಗಮನ ಹರಿಸಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ನಡೆಯುತ್ತಿರುವ ಇದು ಮೊದಲ ಟೆಸ್ಟ್ ಸರಣಿ. ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ನೀಡಿದರೂ, ಕೊನೆಗೂ ಗೆಲುವಿನ ದಡ ತಲುಪಲಾಗಲಿಲ್ಲ.
ಭಾರತದ ಬ್ಯಾಟ್ಸ್ಮನ್ಗಳು ಇಂಗ್ಲಿಷ್ ಪಿಚ್ನಲ್ಲಿ ಭರ್ಜರಿ ಆಟವಾಡಿ ಐದು ಶತಕಗಳನ್ನು ದಾಖಲಿಸಿದರೆ, ಬೌಲರ್ಗಳು ಇಂಗ್ಲೆಂಡ್ನನ್ನು ಮೊದಲ ಇನ್ನಿಂಗ್ಸ್ನಲ್ಲಿ ಕಡಿಮೆ ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಕೆಳ ಕ್ರಮಾಂಕದ ವೈಫಲ್ಯ ಹಾಗೂ ಫೀಲ್ಡಿಂಗ್ ವೇಳೆ ಉಂಟಾದ ಕ್ಯಾಚ್ ಡ್ರಾಪ್ಗಳು ಪಂದ್ಯವನ್ನು ಕೈತಪ್ಪುವಂತೆ ಮಾಡಿತು. ಐದನೇ ದಿನದ ಅಂತಿಮ ಸೆಷನ್ನಲ್ಲಿ ಭಾರತ ಎರಡು ತ್ವರಿತ ವಿಕೆಟ್ ಪಡೆದರೂ, ಇನ್ನೆರಡು ಬೇಕಾಗಿದ್ದವು. ಆದರೆ ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡಿ ಜಯ ಸಾಧಿಸಿತು.
ಈಗ, ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಈ ದೋಷಗಳನ್ನು ತಿದ್ದಿಕೊಂಡು ಕಣಕ್ಕಿಳಿಯಬೇಕಿದೆ. ವಿಶೇಷವಾಗಿ ಫೀಲ್ಡಿಂಗ್ನಲ್ಲಿಯೂ ಗಮನಹರಿಸಬೇಕು. ಕ್ಯಾಚ್ಗಳನ್ನು ಕೈಬಿಟ್ಟರೆ ಆಟ ಕೈಹೋದಂತೇ. ಜೊತೆಗೆ ಕೆಳ ಕ್ರಮಾಂಕದ ಬ್ಯಾಟಿಂಗ್ ಬಲವರ್ಧನೆಯೂ ಪ್ರಮುಖ ಅಗತ್ಯವಾಗಿದೆ.
ಇದೀಗ ಬದಲಾವಣೆಗಳತ್ತ ಟೀಮ್ ಇಂಡಿಯಾ ಚಿತ್ತಹರಿಸಿದೆ. ಮೊದಲ ಟೆಸ್ಟ್ನಲ್ಲಿ ಮೂರು ವೇಗಿಗಳೊಂದಿಗೆ ಆಡಿದ ಟೀಂ, ಎರಡನೇ ಪಂದ್ಯಕ್ಕೆ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಲ್ರೌಂಡರ್ ಆಯ್ಕೆ ಮಾಡಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಅರ್ಶದೀಪ್ ಸಿಂಗ್ ಸೇರಿಕೊಂಡು ನಾನಾ ದಿಕ್ಕುಗಳಿಂದ ಇಂಗ್ಲೆಂಡ್ ಅನ್ನು ಕಟ್ಟಿಹಾಕಬಹುದು ಎಂಬ ನಂಬಿಕೆ ವ್ಯಕ್ತವಾಗಿದೆ.
ಅರ್ಶದೀಪ್ ಎಡಗೈ ವೇಗಿಯಾಗಿರುವ ಕಾರಣ, ಜಹೀರ್ ಖಾನ್ನ ಬಳಿಕ ಭಾರತ ತಂಡಕ್ಕೆ ಅಗತ್ಯವಿರುವ ಆಯಾಮವೊಂದನ್ನು ಪೂರೈಸಬಲ್ಲ ಶಕ್ತಿ ಅವರಲ್ಲಿದೆ. ಆಸ್ತ್ರೇಲಿಯಾದ ಸ್ಟಾರ್ಕ್ ಅವರ ರೀತಿಯಲ್ಲೇ, ಇಂಗ್ಲಿಷ್ ಪಿಚ್ನಲ್ಲಿ ಅರ್ಶದೀಪ್ ಪರಿಣಾಮಕಾರಿಯಾಗಬಹುದು ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಈ ಪಂದ್ಯಕ್ಕೆ ಪ್ರಮುಖ ಆಯ್ಕೆ ಎಂಬ ಅಭಿಪ್ರಾಯ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿದೆ.
ಅಂತಿಮ ತಂಡದಲ್ಲಿ ಐದು ಬ್ಯಾಟ್ಸ್ಮನ್ಗಳು, ನಾಲ್ಕು ವೇಗಿಗಳು ಮತ್ತು ಇಬ್ಬರು ಆಲ್ರೌಂಡರ್ಗಳ ಸಮತೋಲನ ಸಾಧಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಇದು ಟೀಮ್ ಇಂಡಿಯಾದ ಹೊಸ ಮಂತ್ರವಾಗಿದ್ದು, ಇಂಗ್ಲೆಂಡ್ನ ನೆಲದಲ್ಲಿ ಅವರನ್ನೇ ಸೋಲಿಸುವ ಗುರಿಯತ್ತ ಭಾರತ ತಂಡ ದಿಟ್ಟ ಹೆಜ್ಜೆ ಇಡುವ ಸಮಯ ಇದು.
ಎಡ್ಜ್ಬಾಸ್ಟನ್ನ ಬೋಸ್ಟನ್ನಲ್ಲಿ ಜುಲೈ 2ರಂದು ಆರಂಭಗೊಳ್ಳುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಮಬಲ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.