ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಡಿಲಿಮಿಟೇಷನ್ ಪ್ರಕ್ರಿಯೆಯ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ನೀಡಿರುವ ʼಅನರ್ಜಿತ ಹೇಳಿಕೆಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ ಮತ್ತು ತನ್ನ ʼಕೋಮುವಾದಿ ಅಜೆಂಡಾʼವನ್ನು ಕೈಬಿಡುವಂತೆ ಒತ್ತಾಯಿಸಿದೆ.
“ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಕುರಿತು ಇಸ್ಲಾಮಿಕ್ ಸಹಕಾರ ಸಂಘಟನೆಯ ಹೇಳಿಕೆಗಳು ಭಾರತಕ್ಕೆ ಬೇಸರವನ್ನುಂಟು ಮಾಡಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಸ್ಮೀರದ ಕುರಿತು ಒಐಸಿ ಮಾಡಿರುವ ಆಪಾದನೆಯನ್ನು ಭಾರತ ತಿರಸ್ಕರಿಸುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆಯೊಂದರಲ್ಲಿ ತಿರಸ್ಕರಿಸಿದ್ದಾರೆ.
“ಇಸ್ಲಾಮಿಕ್ ಸಹಕಾರ ಸಂಘಟನೆಯು ತನ್ನ ಕೋಮುವಾದಿ ಅಜೆಂಡಾಗಳಿಂದ ಹೊರಬರಬೇಕು. ಕೇವಲ ಒಂದು ರಾಷ್ಟ್ರದ ಒತ್ತಾಯದ ಮೇರೆ ಭಾರತದ ಮೇಲೆ ಅನಗತ್ಯ ಒತ್ತಡ ಹಾಕಬಾರದು” ಎಂದು ಪಾಕಿಸ್ತಾನದ ಹೆಸರು ಹೇಳದೆಯೇ ಸಂದೇಶವನ್ನು ರವಾನಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಚುನಾವಣೆಯ ದೃಷ್ಟಿಯಿಂದ ಡಿಲಿಮಿಟೇಷನ್ ಆಯೋಗವು ತನ್ನ ವರದಿಯನ್ನು ಸಲ್ಲಿಸಿತ್ತು. ಈ ಕುರಿತು ಒಐಸಿ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಜನಸಂಖ್ಯಾ ರಚನೆಯನ್ನು ಬದಲಾಯಿಸುವ ಭಾರತದ ಪ್ರಯತ್ನಗಳಿಗೆ ಕಳವಳ ವ್ಯಕ್ತಪಡಿಸಿದ್ದಲ್ಲದೇ ಕಾಶ್ಮೀರಿ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿತ್ತು.