ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ 100 ಕಿ.ಮೀ. ದೂರದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಯನ್ನು ನಾಶಪಡಿಸಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, 2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಪಾಕಿಸ್ತಾನ ಪ್ರಾಯೋಜಿಸಿದ ಭಯೋತ್ಪಾದಕರಿಗೆ, ಅದು ಉರಿಯಾಗಿರಲಿ, ಪುಲ್ವಾಮಾ ಆಗಿರಲಿ ಅಥವಾ ಪಹಲ್ಗಾಮ್ ಆಗಿರಲಿ ಸೂಕ್ತವಾದ ಪ್ರತ್ಯುತ್ತರವನ್ನು ನೀಡಿದ್ದಾರೆ ಎಂದು ಹೇಳಿದರು.
ಇಂದು ಪ್ರಧಾನಿ ಮೋದಿ ಭಯೋತ್ಪಾದಕ ದಾಳಿಗೆ ನೀಡಿದ ಉತ್ತರ ಜಗತ್ತನ್ನು ಬೆರಗುಗೊಳಿಸಿದೆ ಮತ್ತು ಪಾಕಿಸ್ತಾನವನ್ನು ಭಯಭೀತಗೊಳಿಸಿದೆ. ನಮ್ಮ ಸೇನೆ ಪಾಕಿಸ್ತಾನದೊಳಗೆ 100 ಕಿ.ಮೀ. ದಾಳಿ ಮಾಡುವ ಮೂಲಕ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇಂದು ಭಾರತ ಅನೇಕ ಅಂತಾರಾಷ್ಟ್ರೀಯ ಭಯೋತ್ಪಾದಕ ಚಟುವಟಿಕೆಗಳನ್ನು ಪ್ಲಾನ್ ಮಾಡಿ ಸಿಯಾಲ್ಕೋಟ್ ಮತ್ತು ಇತರ ಭಯೋತ್ಪಾದಕ ಶಿಬಿರಗಳಲ್ಲಿ ಅಡಗಿಕೊಂಡಿದ್ದವರಿಗೆ ಭಾರತದ ಜನರ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆದರೆ, ಅದರ ಪ್ರತಿಕ್ರಿಯೆ ಎರಡು ಪಟ್ಟು ಬಲವಾಗಿರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ ಎಂದು ಅವರು ಒತ್ತಿ ಹೇಳಿದರು.
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಗಳನ್ನು ನಾಶಪಡಿಸಲಾಯಿತು. ಭಯೋತ್ಪಾದಕರಿಗೆ ತರಬೇತಿ ನೀಡಲಾಗುತ್ತಿದ್ದ ಮತ್ತು ಅವರ ಅಡಗುತಾಣಗಳಾಗಿದ್ದ 9 ಸ್ಥಳಗಳನ್ನು ನಾವು ನಾಶಪಡಿಸಿದ್ದೇವೆ. ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಸೇನೆಯ ಪಾಕಿಸ್ತಾನದೊಳಗೆ 100 ಕಿ.ಮೀ. ಒಳಗೆ ನುಗ್ಗಿ ಅವರ ಶಿಬಿರಗಳನ್ನು ನಾಶಪಡಿಸಿದೆ ಎಂದರು.