ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯ: ಚಲುವರಾಯಸ್ವಾಮಿ ಆರೋಪ

ಹೊಸದಿಗಂತ ವರದಿ,ಮಂಡ್ಯ:

ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದ 13 ಕ್ಷೇತ್ರಗಳ ಪೈಕಿ ಕೇವಲ 2 ಸ್ಥಾನಗಳನ್ನು ಮಾತ್ರ ಒಕ್ಕಲಿಗರಿಗೆ ನೀಡಿದೆ. ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ದೇವೇಗೌಡರ ಅಳಿಯ ಎಂಬ ಕಾರಣಕ್ಕೆ ಡಾ.ಸಿ.ಎನ್.ಮಂಜುನಾಥ್ ಅವರಿಗೆ ನೀಡಿರುವುದನ್ನು ಹೊರತುಪಡಿಸಿದರೆ ಉಳಿದ ಭಾಗದಲ್ಲಿ ಒಕ್ಕಲಿಗರನ್ನು ಅವಕಾಶ ವಂಚಿತರನ್ನಾಗುವಂತೆ ಮಾಡಿದೆ ಎಂದು ದೂಷಿಸಿದರು.

ಬಿಜೆಪಿಯೊಳಗೆ ಆಂತರಿಕ ಗೊಂದಲ 
ಬಿಜೆಪಿಯೊಳಗೆ ಆಂತರಿಕವಾಗಿ ಸಾಕಷ್ಟು ಗೊಂದಲಗಳಿವೆ. ಹಿರಿಯ ನಾಯಕ ಸದಾನಂದಗೌಡರಿಗೆ ಟಿಕೆಟ್ ಕೊಟ್ಟಿಲ್ಲ, ಮೈಸೂರಿನಲ್ಲಿ ಪ್ರತಾಪ್‌ಸಿಂಹ ಅವರನ್ನು ದೂರವಿಡಲಾಗಿದೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಟಿಕೆಟ್ ನೀಡಿಲ್ಲ, ಮೈಸೂರು ಟಿಕೆಟ್ ಸಿಗದಿರುವ ಬಗ್ಗೆ ಪ್ರತಾಪ್‌ಸಿಂಹಗೆ ಒಳಗೊಳಗೇ ನೋವಿದೆ. ಒಕ್ಕಲಿಗರನ್ನು ಬಿಜೆಪಿಯೊಳಗೆ ಬಹಳ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಬಿಜೆಪಿ ರೂಪಿಸಿದ ಮೈತ್ರಿ ಸುಳಿಯೊಳಗೆ ಜೆಡಿಎಸ್ ಸಿಕ್ಕಿಹಾಕಿಕೊಂಡಿದೆ. 2-3 ಸ್ಥಾನಗಳಿಗಾಗಿ ಮೈತ್ರಿ ಮಾಡಿಕೊಂಡು ಪಶ್ಚಾತ್ತಾಪ ಪಡುವಂತಾಗಿದೆ. ಬಿಜೆಪಿ ವರ್ತನೆಯನ್ನು ಸಹಿಸಲಾಗದೆ ಕುಮಾರಸ್ವಾಮಿ ಅವರು ಮೊನ್ನೆ ಮಾಧ್ಯಮದ ಮುಂದೆ ಹೋಗಿದ್ದಾರೆ. ಮೈತ್ರಿಧರ್ಮವನ್ನು ಬಿಜೆಪಿಯೇ ಪಾಲಿಸದಿರುವುದು ಸಹಜವಾಗಿಯೇ ಜೆಡಿಎಸ್‌ನವರಿಗೆ ನೋವುಂಟುಮಾಡಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. Who is Cheluvaraya Swamy to cooment on BJP. He must mind his work with Congress. Vokkaliga in BJP will take a call on that.

LEAVE A REPLY

Please enter your comment!
Please enter your name here