ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷ ದಿನೇ ದಿನೇ ಹೆಚ್ಚುತ್ತಲ್ಲೇ ಇದ್ದು, ಯುದ್ಧದ ಭೀಕರತೆ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸುತ್ತಲ್ಲೇ ಇದೆ. ಇರಾನ್ ನಿರಂತರವಾಗಿ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದು, ಇದರ ನಡುವೆ ಕುತೂಹಲಕಾರಿ ವಿಚಾರ ಏನೆಂದರೆ ಕ್ಷಿಪಣಿಗಳ ಮೇಲೆ ‘ಭಾರತದ ಜನತೆಗೆ ಧನ್ಯವಾದ’ ಎಂಬ ಸಂದೇಶ ಬರೆಯಲಾಗಿದೆ.
ಭಾರತದ ಮುಂಬೈನಲ್ಲಿರುವ ಇರಾನ್ನ ಕಾನ್ಸುಲೇಟ್ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಸ್ರೇಲ್ ಮೇಲೆ 83 ನೇ ಸುತ್ತಿನ ದಾಳಿ ನಡೆಸಿದ್ದು, ಕ್ಷಿಪಣಿಗಳ ಮೇಲೆ ಭಾರತ, ಪಾಕಿಸ್ತಾನ, ಸ್ಪೇನ್ ಹಾಗೂ ಜರ್ಮನಿ ದೇಶದ ಜನರಿಗೆ ಧನ್ಯವಾದಗಳು ಎಂದು ಬರೆಯಲಾಗಿದೆ. ಬೆಂಬಲ ಮತ್ತು ನಮ್ಮೊಂದಿಗೆ ನಿಂತಿರುವುದಕ್ಕೆ ಇರಾನ್ನ ಏರೋಸ್ಪೇಸ್ ಫೋರ್ಸ್ನಿಂದ ಕೃತಜ್ಞತೆಗಳು ಎಂದು ಬರೆದುಕೊಂಡಿದೆ.
ಈಗಾಗಲೇ ಭಾರತ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿರುವ ಇರಾನ್ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಇತ್ತ ಇರಾನ್ ನಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡವರಿಗೆ ಭಾರತವೂ ಮಾನವೀಯ ನೆಲೆಯಲ್ಲಿ ವೈದ್ಯಕೀಯ ನೆರವನ್ನು ನೀಡಿದೆ . ಹೀಗಾಗಿ ಈ ಕೃತಜ್ಞತೆ ಭಾರತ ಇರಾನ್ನೊಂದಿಗೆ ಉತ್ತಮ ಸ್ನೇಹವನ್ನು ಪ್ರತಿಬಿಂಬಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.



