Sunday, November 9, 2025

ನಕ್ಸಲರ ಸ್ನೇಹ, ದೇಶಪ್ರೇಮಿಗಳ ದ್ವೇಷವೇ ಕಾಂಗ್ರೆಸ್ ನೀತಿಯೇ?: ಸಿ.ಟಿ. ರವಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಪರಿಷತ್ ಸದಸ್ಯ (ಎಂಎಲ್‌ಸಿ) ಸಿ.ಟಿ. ರವಿ, ನಕ್ಸಲರು ಮತ್ತು ನಗರ ನಕ್ಸಲರು ಕಾಂಗ್ರೆಸ್‌ಗೆ ಆತ್ಮೀಯರಾಗುತ್ತಾರೆ, ಆದರೆ ದೇಶಭಕ್ತರನ್ನು ಕಂಡರೆ ಅವರಿಗೆ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಆರ್‌ಎಸ್‌ಎಸ್ ಕುರಿತು ಪ್ರತಿಕ್ರಿಯೆ: “ಆರ್‌ಎಸ್‌ಎಸ್ ಇರುವುದು ಜನರ ಮನಸ್ಸಿನಲ್ಲಿ. ದೇಶ ಹಾಳು ಮಾಡುವ ವಿಚಾರವಾಗಿದ್ದರೆ ಸಂಘ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಸಂಘದಲ್ಲಿರುವುದು ನಿಸ್ವಾರ್ಥ ದೇಶಪ್ರೇಮ, ಅದು ಬೆಳೆಯುತ್ತಲೇ ಇದೆ” ಎಂದು ಸಿ.ಟಿ. ರವಿ ಸಮರ್ಥಿಸಿಕೊಂಡರು.

ದೇಶಭಕ್ತರನ್ನು ದೂರವಿಟ್ಟರೆ ದೇಶಕ್ಕೆ ನಷ್ಟ: ಕಾಂಗ್ರೆಸ್ ಸೇವಾದಳವನ್ನು ಉಲ್ಲೇಖಿಸಿ, “ಕಾಂಗ್ರೆಸ್ ಸೇವಾದಳ ಅದಕ್ಕೂ ನೂರು ವರ್ಷ, ಯಾರಾದರೂ ನೆನಪಿಸುತ್ತಾರಾ?” ಎಂದು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್ ಜನಪ್ರಿಯತೆ ಕುರಿತು ಮಾತನಾಡಿದರು. “ನಮಗೆ ಗಣವೇಷವನ್ನು ಸರಬರಾಜು ಮಾಡಲು ಆಗದಂತಹ ಮಟ್ಟಕ್ಕೆ ಬೇಡಿಕೆ ಬಂದಿದೆ. ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುವ ಜನ ದೇಶ ಬಲ ಆಗಬೇಕೆಂದು ಬಯಸುತ್ತಾರೆ. ದೂರ ಇಟ್ಟರೆ ದೇಶಕ್ಕೆ ನಷ್ಟವಾಗಲಿದೆ. ಇದರ ಲಾಭವನ್ನು ಅರಾಜಕವಾದಿಗಳು, ‘ಭಾರತ್ ತೇರೆ ತುಕಡೆ ಹೂಂಗೆ, ಇನ್ಷಾ ಅಲ್ಲಾ’ ಅನ್ನೋರು ಪಡೆಯುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್ ವಿರೋಧಿಗಳೇ ದೇಶದ್ರೋಹಿಗಳು: ತಮ್ಮ ಮಾತನ್ನು ಮುಂದುವರೆಸಿದ ಸಿ.ಟಿ. ರವಿ, “ನಕ್ಸಲರು, ನಗರ ನಕ್ಸಲರು ಕಾಂಗ್ರೆಸ್‌ನವರಿಗೆ ಆತ್ಮೀಯರಾಗುತ್ತಾರೆ. ದೇಶಭಕ್ತಿಯ ಸಂಘಟನೆ ಕಂಡರೆ ಅಸಹನೆ ಆಗುತ್ತೆ. ಯಾರನ್ನು ದೇಶದ್ರೋಹಿಗಳು ಎನ್ನಬೇಕು? ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿರೋಧ ಮಾಡುವವರು ದೇಶದ್ರೋಹಿಗಳು” ಎಂದು ಅಸಮಾಧಾನ ಹೊರಹಾಕಿದರು.

error: Content is protected !!