ಮೂಲಭೂತ ಸೌಕರ್ಯವಿಲ್ಲದ ಶಾಲೆಗಳಿಂದ ಉತ್ತಮ ಶಿಕ್ಷಣ ಸಾಧ್ಯವೇ? 3 ಸರ್ಕಾರ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಕೊರತೆಗಳ ಕುರಿತು 2013 ರಿಂದಲೂ ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ (Karnataka ಈ ಹಿಂದೆಯೇ ಕಾಲಮಿತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಈ ಹಿನ್ನೆಲೆ ಇಂದು ಹೈಕೋರ್ಟ್ ಆದೇಶದ ಅನುಸಾರ ಕೈಗೊಂಡ ಕ್ರಮಗಳ ಬಗ್ಗೆ ಸರ್ಕಾರ ವರದಿ ಸಲ್ಲಿಸಿದೆ. ವರದಿಯ ಜೊತೆಗೆ ಸಲ್ಲಿಸಲಾಗಿದ್ದ ಶೌಚಾಲಯಗಳ ಫೋಟೋ ಗಮನಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರವರಿದ್ದ ವಿಭಾಗೀಯ ಪೀಠ ಶಾಲೆಗಳಲ್ಲಿ ನೀರು, ಶೌಚಾಲಯಗಳ ದುಸ್ಥಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶೌಚಾಲಯಗಳ ಫೋಟೋ ನಮ್ಮ ಆತ್ಮಸಾಕ್ಷಿಗೆ ಆಘಾತ ನೀಡುತ್ತಿದೆ. ಶೌಚಾಲಯಗಳು ದುಸ್ಥಿತಿಯಲ್ಲಿವೆ, ಗಿಡಬಳ್ಳಿ ಬೆಳೆದಿವೆ. ಅಧಿಕಾರಿಗಳು ತಮ್ಮ ಮನೆ ಶೌಚಾಲಯವನ್ನೂ ಹೀಗೇ ಇಟ್ಟುಕೊಳ್ಳುತ್ತಾರಾ? ಸರ್ಕಾರ ಸಲ್ಲಿಸಿರುವ ವರದಿ ಬೇಸರದಾಯಕ, ಆಘಾತಕಾರಿಯಾಗಿದೆ. ಇನ್ನುಕುಡಿಯುವ ನೀರನ್ನು ತಲೆ ಮೇಲೆ ಹೊತ್ತು ತರಲಾಗುತ್ತಿದೆ ಎಂದು ವರದಿಯಲ್ಲಿದೆ. ಕುಡಿಯುವ ನೀರಿನ ಪೂರೈಕೆ ಮಾಡಲೂ ಸರ್ಕಾರಕ್ಕೆ ಸಾಧ್ಯವಿಲ್ಲವೇ. ಹಾಗಿದ್ದರೆ ಮೂಲಭೂತ ಸೌಕರ್ಯ ವಿಲ್ಲದ ಶಾಲೆಗಳಿಂದ ಉತ್ತಮ ಶಿಕ್ಷಣ ಸಾಧ್ಯವೇ? ಎಂಥ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ. ಇಂತಹ ವರದಿ ಸಲ್ಲಿಸುವ ಧೈರ್ಯ ಅಧಿಕಾರಿಗಳಿಗೆ ಹೇಗೆ ಬಂತು? ಇದಕ್ಕೆಲ್ಲಾ ಯಾರು ಜವಾಬ್ದಾರಿ? ಅಧಿಕಾರಿಗಳ ಚಲ್ತಾ ಹೈ ಮನಸ್ಥಿತಿ ಸಹಿಸಲು ಸಾಧ್ಯವಿಲ್ಲ. ಇಂತಹ ಶಾಲೆಗೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಕಳಿಸುತ್ತಾರಾ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

2013 ರಲ್ಲಿಯೇ ಈ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದಾಗಿನಿಂದಲೂ ರಿಂದ 3 ಸರ್ಕಾರ ಬದಲಾಗಿವೆ. ಆದರೂ ಶಾಲೆಗಳ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಮಕ್ಕಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸ್ವಲ್ಪವಾದರೂ ಕಾಳಜಿ, ಗಂಭೀರತೆ ಇರಬೇಕು. ಪರಿಸ್ಥಿತಿ ನೋಡಿ ನಮಗೆ ನೋವಾಗಿದೆ. ಶಾಲೆಗಳ ಶೌಚಾಲಯದ ಸ್ಥಿತಿ ಕರುಣಾಜನಕವಾಗಿದೆ . ಯಾವ ಪೋಷಕರೂ ಇಂತ ಶಾಲೆಗೆ ಮಕ್ಕಳನ್ನು ಕಳಿಸಲ್ಲ . ಹೆಸರಿಗೆ ಮಾತ್ರ ಶೌಚಾಲಯ ನಿರ್ಮಿಸಲಾಗಿದೆ . ಸರ್ಕಾರದ ವರದಿ ಕೇವಲ ಕಣ್ಣೊರೆಸುವ ತಂತ್ರವಿದ್ದಂತಿದೆ ಎಂದು ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ರಿದ್ದ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನಮಗೆ 3 ತಿಂಗಳಲ್ಲಿ ಹೊಸದಾಗಿ ಸರ್ವೆ ನಡೆಸಿ ವರದಿ ಸಲ್ಲಿಸಬೇಕು. ಹೈಕೋರ್ಟ್ ನ ಆದೇಶದ ವಿವರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತಲುಪಿಸುವಂತೆಯೂ ಹೈಕೋರ್ಟ್ ನಿರ್ದೇಶನ ನೀಡಿದೆ.

ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ವಿಚಾರದ ಬಗ್ಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ನಡೆಸಿರುವ ಹೈಕೋರ್ಟ್ ಕಾಲಕಾಲಕ್ಕೆ ಸರ್ಕಾರದಿಂದ ವರದಿ ಕೇಳುತ್ತಿದೆ. ಅದಕ್ಕಾಗಿಅಮೈಕಸ್ ಕ್ಯೂರಿಯಾಗಿ ಹಿರಿಯ ವಕೀಲ ಕೆ.ಎನ್. ಫಣೀಂದ್ರ ರನ್ನು ನೇಮಕಗೊಳಿಸಲಾಗಿದೆ. ಕಳೆದ ತಿಂಗಳು ವರದಿ ನೀಡಿದ್ದ ಅಮೈಕಸ್ ಕ್ಯೂರಿ 2901 ಮಕ್ಕಳು ಇನ್ನೂ ಶಾಲೆಯಿಂದ ಹೊರಗುಳಿದಿದ್ದಾರೆ. 4122 ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. 464 ಶಾಲೆಗಳಲ್ಲಿ ಶೌಚಾಲಯ ಇಲ್ಲ, 87 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ ಎಂದು ವರದಿ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!