ಕಾಂಗ್ರೆಸ್ ಪಕ್ಷಕ್ಕೆ ಡಾ.ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇದೆಯೇ?: ಬಿ.ವೈ. ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಪಕ್ಷಕ್ಕೆ ಡಾ.ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಎಸ್‍ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ “ಸಂವಿಧಾನ ಸಮರ್ಪಣಾ ದಿನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಶವಸಂಸ್ಕಾರವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದರು.

ನೆಹರೂ ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದವರ ರಾಷ್ಟ್ರೀಯ ಸ್ಮಾರಕವನ್ನೇಕೆ ನಿರ್ಮಿಸಿಲ್ಲ? ಅವರ ನೆನಪಾಗಲಿಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಆದರೆ ಮೋದಿ ಅವರು ಅಂಬೇಡ್ಕರ್ ಅವರ ಸ್ಮಾರಕ ಘೋಷಿಸಿ, ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದವರು ಪ್ರಧಾನಿ ಮೋದಿ

ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ ಎಂದ ಅವರು, ಬಿಜೆಪಿ ಸರಕಾರವು ಪಂಚತೀರ್ಥಗಳನ್ನು ಅಭಿವೃದ್ಧಿ ಮಾಡಿದ್ದನ್ನು ನೆನಪಿಸಿದರು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. 26 ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಮೋದಿಯವರು. ಬಿಜೆಪಿ ಉದ್ದೇಶವೇ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು ಎಂದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನ. 1949 ನವೆಂಬರ್ 26 ರಂದು ಭಾರತೀಯರಿಗೆ ಪವಿತ್ರವಾದ ಸಂವಿಧಾನವನ್ನು ಅಂಗೀಕರಿಸಿದ ದಿನ. ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಮತ್ತು ದೂರದೃಷ್ಟಿಯು ಈ ನಮ್ಮ ಸಂವಿಧಾನವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ತಿಳಿಸಿದರು.

ನಮ್ಮ ದೇಶದ ಸಂವಿಧಾನ ಈ ರಾಷ್ಟ್ರದ ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ ಎಂದು ಹೆಸರಾಗಿದೆ. ಭಾರತದ ಸಂವಿಧಾನವು ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಪ್ರತಿಪಾದಿಸುತ್ತದೆ, ಇದುವೇ ನಮ್ಮ ದೇಶದ ಆಡಳಿತ ವ್ಯವಸ್ಥೆಯ ತಳಹದಿ ಎಂದರು.

ಸಿದ್ದರಾಮಯ್ಯನವರದ್ದು ಮತಬ್ಯಾಂಕ್ ರಾಜಕೀಯ

ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಬಾಸಾಹೇಬರ ಆಶಯವನ್ನು ಮೋದಿಜೀ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ ಎಂದು ತಿಳಿಸಿದರು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಅತಿಥಿಯಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ದೀನದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬಯಸಿದಂತೆ ಅಸ್ಪೃಶ್ಯರು ಮತ್ತು ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ಕೊಡಲು ಹೇಳಿದ್ದರು. ಬಡತನ, ಮೂಢನಂಬಿಕೆ, ಶಿಕ್ಷಣ ವಂಚಿತರಾಗಿರುವ ದಲಿತರನ್ನು ಮೇಲೆತ್ತುವ ಕೆಲಸವನ್ನು ಯಾವತ್ತೂ ಕಾಂಗ್ರೆಸ್ ಪಕ್ಷ ಮಾಡಲಿಲ್ಲ. ಸಿದ್ದರಾಮಯ್ಯನವರು ಅಕ್ಕಿ ಕೊಡ್ತೀನಿ, ಬ್ಯಾಳಿ ಕೊಡ್ತೀನಿ, ಕೋಳಿ, ಕುರಿ ಕೊಡ್ತೀನಿ ಎನ್ನುತ್ತಾರೆ. 140 ಕೋಟಿಯಲ್ಲಿ ಶೇ 25 ದಲಿತರಿರುವ ನಾವು ನಮಗೆ ಕೋಳಿ, ಕುರಿ, ಅಕ್ಕಿ ಬೇಡ; ಶಿಕ್ಷಣ ಕೊಡಿ ಎಂದು ಒತ್ತಾಯಿಸಬೇಕು ಎಂದು ಕಿವಿಮಾತು ಹೇಳಿದರು.

ಅಂಬೇಡ್ಕರ್‌ರ ಪಂಚತೀರ್ಥಗಳನ್ನು ಮೋದಿ ಸರಕಾರ ನಿರ್ಮಿಸಿದೆ

ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, 2015ರ ವರೆಗೂ ನವೆಂಬರ್ 26ರ ಈ ದಿನವನ್ನು ಲಾಡೆ ಎಂದು ಕರೆಯುತ್ತಿದ್ದರು. ಸಂವಿಧಾನ ಗೌರವ ದಿನ ಎಂದು ಅದನ್ನು ಆಚರಿಸಲು ನರೇಂದ್ರ ಮೋದಿಜೀ ಅವರು ತಿಳಿಸಿದರು ಎಂದು ವಿವರಿಸಿದರು.

ಭಾರತರತ್ನವನ್ನು ಅವರಿಗೆ ಅವರೇ ಕೊಟ್ಟುಕೊಂಡರು. ನೈಜ ಭಾರತರತ್ನ ಡಾ. ಅಂಬೇಡ್ಕರ್ ಅವರಿಗೆ ಭಾರತರತ್ನವನ್ನು ಹಲವು ದಶಕಗಳ ಬಳಿಕ ಅಟಲ್‍ಜೀ ಅವರ ಪ್ರಸ್ತಾವನೆಯ ನಂತರ ಪ್ರಧಾನಿ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲದ ಸರಕಾರ ಇದ್ದಾಗ ನೀಡಿದ್ದರು ಎಂದು ನೆನಪಿಸಿದರು.
ಅವರಿಗೆ ಬದುಕಿದ್ದಾಗಲೇ ಭಾರತರತ್ನ ಕೊಡಬೇಕಿತ್ತು. 33 ವರ್ಷಗಳ ವರೆಗೆ ಯಾಕೆ ಕೊಟ್ಟಿಲ್ಲ? ಅಂಬೇಡ್ಕರರಿಗೆ ಅವರ ವ್ಯಕ್ತಿತ್ವಕ್ಕೆ ತಡವಾಗಿ ನ್ಯಾಯ ಸಿಗುತ್ತಿದೆ ಎಂದು ವಿಶ್ಲೇಷಿಸಿದರು. ಅಂಬೇಡ್ಕರರ ಪಂಚತೀರ್ಥಗಳನ್ನು ಮೋದಿಜೀ ಅವರ ಸರಕಾರ ನಿರ್ಮಿಸಿದೆ. ಆದರೆ, 2004 ರಿಂದ 2014ರ ವರೆಗೆ ಇದ್ದ ಯುಪಿಎ ಸರಕಾರ ಈ ವಿಚಾರದತ್ತ ಯೋಚನೆಯನ್ನೂ ಮಾಡಲಿಲ್ಲ.
ಮೈ ಮರೆವಿನ ಕ್ಷಣ ಘೋರ ಭೀಕರ. ರಾಷ್ಟ್ರವಿನಾಶಕೆ ದಾರಿ ಎಂಬ ಕವಿವಾಣಿಯನ್ನು ಉಲ್ಲೇಖಿಸಿದ ಅವರು, ಕುರಿ, ಕೋಳಿ ಆಸೆಗೆ ಮೈಮರೆತರೆ ಅದು ರಾಷ್ಟ್ರವಿನಾಶಕೆ ದಾರಿ. ಸಂವಿಧಾನ ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಪರದೇಶೀಯರ ಆಳ್ವಿಕೆಯ ನಂತರ ನಮ್ಮ ಮಾನಸಿಕತೆ ಕುಗ್ಗಿ ಹೋಗಿತ್ತು. 1929ರಲ್ಲಿ ಭಾರತಕ್ಕೆ ಒಂದು ಸಂವಿಧಾನ ಬೇಕೆಂಬ ನಿರ್ಧಾರಕ್ಕೆ ಬರಲಾಯಿತು. 1946ರಲ್ಲಿ ಸಂವಿಧಾನ ಸಮಿತಿ ರಚಿಸಿ, ಲಕ್ಷಾಂತರ ಸಲಹೆ ಸೂಚನೆ ಸ್ವೀಕರಿಸಿ, ಅಕ್ಷರಶಃ ಒಂದು ತಪಸ್ಸಿನ ಮಾದರಿಯಲ್ಲಿ ಕೆಲಸ ನಡೆಯಿತು. ವೈವಿಧ್ಯಮಯ ಜನಜೀವನ, ವಿವಿಧ ರೀತಿಯ ಸಂಸ್ಕೃತಿ, ರಾಜಪರಂಪರೆಯ ಕಟ್ಟುಪಾಡು, ನಿಯಮಾವಳಿಗಳ ಮಧ್ಯೆ ಡಾ. ಅಂಬೇಡ್ಕರ್ ಮತ್ತು ಇತರ ಸದಸ್ಯರು ಜಗತ್ತಿಗೇ ಅತ್ಯುತ್ತಮ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ.
ನರೇಂದ್ರ ಮೋದಿಜೀ ಅವರ ಸರಕಾರದಿಂದ ಮನೆಮನೆಗೆ ಸೌಕರ್ಯಗಳು ಲಭಿಸಿವೆ. ಮನೆಗಳು, ಶೌಚಾಲಯಗಳು, ಗ್ಯಾಸ್, ರಸ್ತೆ, ರೈಲ್ವೆ ಸೇರಿ ಅನೇಕ ಮೂಲಸೌಕರ್ಯಗಳನ್ನು ನೀಡಲಾಗಿದೆ ಎಂದು ನೆನಪಿಸಿದರು.

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಧರ್ಮದ ಮುಂದುವರೆದ ಭಾಗವೇ ಸಂವಿಧಾನ. ಧರ್ಮವನ್ನು ಹೊರತುಪಡಿಸಿದ ಸಂವಿಧಾನ ನಮ್ಮ ದೇಶದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಪಕ್ಷದ ಪದಾಧಿಕಾರಿಗಳು, ಎಸ್‍ಸಿ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!