ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ, ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ವಿವರಿಸಲು ವಿದೇಶಗಳಿಗೆ ಸರ್ಕಾರ ನಿಯೋಜಿಸಲಿರುವ ಏಳು ನಿಯೋಗಕ್ಕೆ ಸಂಸದ ಶಶಿ ತರೂರ್ ಹೆಸರನ್ನು ಸೂಚಿಸದ ಕಾಂಗ್ರೆಸ್ ನಡೆಗೆ ಬಿಜೆಪಿ ಟೀಕಿಸಿದ್ದು, ಹೈಕಮಾಂಡ್ ನ್ನು ಮೀರಿಸುವರೆಂದು ಅವರನ್ನು ನಾಮ ನಿರ್ದೇಶನ ಮಾಡಲಿಲ್ಲವೇ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ಲೋಕಸಭೆಯಲ್ಲಿ ಐಎನ್ಸಿ ಉಪ ನಾಯಕ ಗೌರವ್ ಗೊಗೊಯ್, ರಾಜ್ಯಸಭಾ ಸಂಸದ ಡಾ. ಸೈಯದ್ ನಾಸೀರ್ ಹುಸೇನ್ ಮತ್ತು ಲೋಕಸಭಾ ಸಂಸದ ರಾಜಾ ಬ್ರಾರ್ ಅವರ ಹೆಸರುಗಳನ್ನು ಸೂಚಿಸಿತ್ತು. ಆದ್ರೆ ಕೇಂದ್ರ ಸರಕಾರ ಶಶಿ ತರೂರ್ ಹೆಸರನ್ನು ಅಯ್ಕೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ,ತಾನು ನೀಡಿರುವ ಸಂಸದರ ಪಟ್ಟಿಯನ್ನು ‘ಬದಲಾಯಿಸುವುದಿಲ್ಲ’ ಎಂದು ಹೇಳಿದ್ದರು.
ಇದೀಗ ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಇಲಾಖೆ ಮುಖ್ಯಸ್ಥ ಅಮಿತ್ ಮಾಳವೀಯಾ, ಸಂಸದ ಶಶಿ ತರೂರ್ ಅವರನ್ನು ಹೈಕಮಾಂಡ್ ನ್ನು ಮೀರಿಸಿದ್ದರಿಂದ ಅವರನ್ನು ನಾಮ ನಿರ್ದೇಶನ ಮಾಡಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶಶಿ ತರೂರ್ ಅರ ವಾಗ್ಚಾತುರ್ಯ, ವಿಶ್ವಸಂಸ್ಥೆಯ ಅಧಿಕಾರಿಯಾಗಿ ಅವರ ದೀರ್ಘ ಅನುಭವ ಮತ್ತು ವಿದೇಶಾಂಗ ನೀತಿಯ ವಿಷಯಗಳ ಬಗ್ಗೆ ಅವರ ಆಳವಾದ ಒಳನೋಟವನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಾದರೆ, ಕಾಂಗ್ರೆಸ್ ಪಕ್ಷ ಮತ್ತು ವಿಶೇಷವಾಗಿ ರಾಹುಲ್ ಗಾಂಧಿ, ಮಹತ್ವದ ವಿಷಯಗಳ ಕುರಿತು ಭಾರತದ ನಿಲುವನ್ನು ವಿವರಿಸಲು ವಿದೇಶಗಳಿಗೆ ಕಳುಹಿಸಲಾಗುತ್ತಿರುವ ಸರ್ವ ಪಕ್ಷ ನಿಯೋಗಗಳಿಗೆ ಅವರ ಹೆಸರನ್ನು ಸೂಚಿಸದಿರಲು ಕಾರಣವೇನು? ಇದು ಅಭದ್ರತೆಯೇ? ಅಸೂಯೆಯೇ? ಅಥವಾ ಹೈಕಮಾಂಡ್ ನ್ನು ಮೀರಿಸುವರೆಂದು ಯಾರಿಗಾದರೂ ಅಸಹಿಷ್ಣುತೆಯೇ ಎಂದು ಪ್ರಶ್ನಿಸಿದ್ದಾರೆ.
ಮಾತು ಮುಂದುವರಿಸಿ, ಕಾಂಗ್ರೆಸ್ ರಾಜ್ಯಸಭಾ ಸಂಸದ ಡಾ. ಸೈಯದ್ ನಾಸೀರ್ ಹುಸೇನ್ ಅವರ ಹೆಸರನ್ನು ಸೂಚಿಸಿರುವುದಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾದಾಗ ವಿಧಾನಸೌಧದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾಂದ್ ಅಂತಾ ಘೋಷಣೆ ಕೂಗಿದ್ದರು. ಈ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.