ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಹರಿದುಬಂದ ಅಶ್ಲೀಲ ಕಮೆಂಟ್ಗಳ ವಿರುದ್ಧ ದೂರು ನೀಡಿದ್ದ ವಿಜಯಲಕ್ಷ್ಮಿ ದರ್ಶನ್ ಅವರು, ಪೊಲೀಸರ ವಿಳಂಬ ಧೋರಣೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ವ್ಯವಸ್ಥೆಯಲ್ಲಿನ ತಾರತಮ್ಯವನ್ನು ಪ್ರಶ್ನಿಸಿದ್ದಾರೆ.
“ಬೇರೊಬ್ಬ ಮಹಿಳೆ ದೂರು ನೀಡಿದಾಗ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ನನ್ನ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನನ್ನ ದೂರು ಅವರಿಗೆ ಅಮುಖ್ಯವಾಗಿ ಕಂಡಿತೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾನೂನು ಎಲ್ಲರಿಗೂ ಸಮಾನ ಎಂದು ನಂಬಿದ್ದ ತಮಗೆ ಈ ಅನುಭವವು ಆಘಾತ ತಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ವಕೀಲರು ನಿರಂತರವಾಗಿ ಫಾಲೋ-ಅಪ್ ಮಾಡಿದರೂ ಪೊಲೀಸರು ಸ್ಪಂದಿಸಿಲ್ಲ. ಈ ವಿಳಂಬಕ್ಕೆ ಯಾವುದೇ ಬಾಹ್ಯ ಶಕ್ತಿಗಳ ಒತ್ತಡ ಕಾರಣವೇ ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 31ರಂದು ಖುದ್ದಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ, ಅಧಿಕಾರಿಗಳನ್ನು ಪ್ರಶ್ನಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಶ್ಲೀಲ ಕಮೆಂಟ್ ಮಾಡುವವರಿಗೆ ಮತ್ತು ಅವರಿಗೆ ಆಶ್ರಯ ನೀಡುವವರಿಗೆ ಕಿವಿಮಾತು ಹೇಳಿರುವ ಅವರು, ಇಂತಹ ನಡವಳಿಕೆಯನ್ನು ಬೆಂಬಲಿಸುವ ಬದಲು ಉತ್ತಮ ಜೀವನ ನಡೆಸಲು ಶ್ರಮಿಸಿ ಎಂದಿದ್ದಾರೆ. ಅಲ್ಲದೆ, ನ್ಯಾಯ ಸಿಗುವವರೆಗೂ ತಾವು ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

