ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಕೆಲ ಶಾಲೆಗಳಲ್ಲಿ ಮಕ್ಕಳಿಂದ ಶೌಚಾಲಯ ತೊಳೆಸಿದ ಪ್ರಕರಣಗಳು ಬೆಳಕಿಗೆ ಬಂದಂತೆ ಪ್ರಕರಣ ದಾಖಲಿಸಿ ಮುಖ್ಯೋಪಾಧ್ಯಾಯರನ್ನು ಸಸ್ಪೆಂಡ್ ಮಾಡಲಾಗುತ್ತಿದೆ.
ಆಸಿಡ್, ಟಾಯ್ಲೆಟ್ ಕ್ಲೀನರ್ನಂಥ ಹಾನಿಕಾರಕ ವಸ್ತುಗಳನ್ನು ಬರಿಗೈನಿಂದ ಮಕ್ಕಳು ಮುಟ್ಟಿದ್ದನ್ನೇ ಸಹಿಸದ ಪೋಷಕರು ಮಕ್ಕಳನ್ನು ಓದೋಕೆ ಕಳಿಸ್ತೀವಿ ಟಾಯ್ಲೆಟ್ ತೊಳೆಯೋದಕ್ಕಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ.
ಇತ್ತ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಮಕ್ಕಳು ಶಾಲೆಯಲ್ಲಿ ಶೌಚಾಲಯ ತೊಳೆಯೋದು ತಪ್ಪೇನಿಲ್ಲ, ಇದೂ ಶಿಕ್ಷಣದ ಭಾಗ ಎಂದು ಹೇಳಿದ್ದಾರೆ.
ಸರಿಯಾದ ಮಾರ್ಗದರ್ಶನ, ಪರಿಕರಗಳನ್ನು ಬಳಸಿ ಮಕ್ಕಳು ಶಾಲಾ ಆವರಣ ಶುಚಿಯಾಗಿಟ್ಟುಕೊಳ್ಳುವುದು, ಟಾಯ್ಲೆಟ್ ತೊಳೆಯುವುದು, ಕಸ ಗುಡಿಸುವುದು ಮಾಡಿದರೆ ತಪ್ಪೇನೂ ಇಲ್ಲ. ಇದು ಶಿಕ್ಷಣದ ಒಂದು ಭಾಗ, ಮಕ್ಕಳು ಚಿಕ್ಕವಯಸ್ಸಿನಿಂದಲೇ ಇಂಥ ಒಳ್ಳೆ ಅಭ್ಯಾಸ ಕಲಿಯಬೇಕು ಎಂದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಈ ಕೆಲಸಗಳನ್ನು ಮಾಡಲು ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಇಲ್ಲ. ಇನ್ನು ಶಿಕ್ಷಕರು ಅಥವಾ ಶಾಲಾಭಿವೃದ್ಧಿ ಸಮಿತಿಯವರು ಈ ಕೆಲಸಗಳನ್ನು ಮಾಡೋದಿಲ್ಲ. ಮಕ್ಕಳು ಬಳಸುವ ಶೌಚಾಲಯಗಳನ್ನು ಅವರೇ ಕ್ಲೀನ್ ಮಾಡಲಿ, ಗ್ಲೌಸ್ ಧರಿಸಿ, ಬ್ರಶ್ ಉಪಯೋಗಿಸಿ, ಮಾಸ್ಕ್ ಧರಿಸಿ ಶೌಚಾಲಯ ಶುಚಿ ಮಾಡಬಹುದು, ಇದರಲ್ಲಿ ತಪ್ಪೇನಿದೆ ಗೊತ್ತಿಲ್ಲ. ಸಣ್ಣವರಿದ್ದಾಗ ನಾನೂ ಕಸ ಗುಡಿಸಿದ್ದೆ ಎಂದು ಹೇಳಿದ್ದಾರೆ.