ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಚರ್ಚೆ ಕಾರಣರಾಗಿದ್ದ ಕಮಲ್ ಹಾಸನ್, ಇಷ್ಟೆಲ್ಲ ರಾದ್ಧಾಂತ ನಡೆದ ಮೇಲೆಯೂ ಕ್ಷಮೆ ಕೇಳುವ ಯೋಚನೆ ಮಾಡದೆ ಉದ್ಧಟತನದಿಂದ ಮಾತನಾಡಿದ್ದಾರೆ. ಈ ಕುರಿತು ಹಲವು ಟೀಕೆ, ಆಕ್ಷೇಪಗಳು ಕೇಳಿ ಬಂದಿದೆ.
ಇದೀಗ ವಸಿಷ್ಠ ಸಿಂಹ ಮಾಧ್ಯಮದ ಮುಂದೆ ಕಮಲ್ ಹೇಳಿಕೆಯ ಕುರಿತು ಮಾತನಾಡಿದ್ದಾರೆ. ಕಮಲ್ ಹೇಳಿಕೆ ಕಲಾವಿದರ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತೆ. ಈಗ ನನ್ನದು ತಮಿಳು ಸಿನಿಮಾ ರಿಲೀಸ್ ಆಗೋದಿದೆ. ಅಲ್ಲಿ ಹೋದಾಗ, ಅವರು ನನ್ನನ್ನು ಕೆಣಕಬಹುದು. ನನ್ನ ಥರ ಹಲವಾರು ಕಲಾವಿದರು ಇದ್ದಾರೆ. ವಿವೇಚನಾರಹಿತ ಹೇಳಿಕೆಯಿಂದಾಗಿ ಹಲವು ಕಲಾವಿದರಿಗೆ ಸಮಸ್ಯೆ ಉಂಟಾಗುತ್ತದೆ.
ಸಿನಿಮಾ ರಿಲೀಸ್ ವೇಳೆಯೇ ಭಾಷೆಯ ಸೆಂಟಿಮೆಂಟ್ನ ಕೆಣಕೋದು ತಪ್ಪು. ಸೂಕ್ಷ್ಮ ವಿಚಾರವನ್ನು ಅಂತಹ ವೇದಿಕೆಯಲ್ಲಿ ಬಳಸಿಕೊಂಡಿದ್ದು ತಪ್ಪು. ಕಮಲ್ ಹಾಸನ್ ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ. ಹಾಗಂತ ಎಲ್ಲವನ್ನು ಒಪ್ಪೋಕೆ ಆಗಲ್ಲ. ತಪ್ಪು ತಪ್ಪೇ. ಇಷ್ಟು ವರ್ಷಗಳ ಕಾಲ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದೀರಿ. ಹೀಗಿರುವಾಗ ಭಾಷೆಯ ವಿಚಾರವನ್ನು ಟ್ರಿಗರ್ ಮಾಡುವ ಅವಶ್ಯಕತೆಯಿರಲಿಲ್ಲ.
ಪ್ರೀತಿ ಇದ್ದ ಕಡೆ ಗೌರವ, ಕ್ಷಮೆ ಕೂಡ ಇರಬೇಕು. ಕ್ಷಮೆ ಕೇಳಿದ್ದರೆ ಅವರು ದೊಡ್ಡವರಾಗುತ್ತಿದ್ದರು. ಬೇಡದ ಜಾಗದಲ್ಲಿ ಬೇಡದ ಮಾತನ್ನು ಆಡಿದಾಗ ಅದಕ್ಕೆ ಬೆಲೆ ತೆರಬೇಕು. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಕಮಲ್ ಹಾಸನ್ ಮಾಡಿದ್ದು ತಪ್ಪು. ಅದನ್ನು ನಾವು ಒಪ್ಪೋಕೆ ಆಗಲ್ಲ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.