June 28, 2026
Sunday, June 28, 2026
spot_img

ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು! HDKಗೆ ಜಿಟಿಡಿ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳಿಗೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನನ್ನ ಬೆಂಬಲ ಮತ್ತು ಶ್ರಮದಿಂದಲೇ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು” ಎಂದು ಜಿಟಿಡಿ ನೆನಪಿಸಿದ್ದಾರೆ. ತಮಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೇವಲ ಅಭಿವೃದ್ಧಿ ರಾಜಕಾರಣ ಮಾತ್ರ ಗೊತ್ತು, ಬೇರೇನೂ ತಿಳಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕುಮಾರ ಪರ್ವದ ಕ್ರೆಡಿಟ್ ಚಾಮುಂಡೇಶ್ವರಿ ಜನತೆಗೆ!

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ‘ಕುಮಾರ ಪರ್ವ’ ಸಮಾವೇಶದ ಯಶಸ್ಸಿನ ಕ್ರೆಡಿಟ್ ಸಂಪೂರ್ಣವಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ ಸಲ್ಲುತ್ತದೆ. ಬೇರೆ ಯಾವುದೇ ಕ್ಷೇತ್ರದಲ್ಲಿ ಇಂತಹ ಬೃಹತ್ ಸಮಾವೇಶ ನಡೆದಿಲ್ಲ ಎಂದು ಜಿಟಿಡಿ ಹೇಳಿದ್ದಾರೆ.

ನನಗೆ ಇನ್‌ಸ್ಟಾಗ್ರಾಂ, ಟಿವಿ ನೋಡಲು ಬರಲ್ಲ!

ಕುಮಾರಸ್ವಾಮಿ ಅವರ ಹೇಳಿಕೆಗಳ ಕುರಿತು ಮಾತನಾಡಿದ ಅವರು, “ನನಗೆ ಫೋನ್, ಇನ್‌ಸ್ಟಾಗ್ರಾಂ ಅಥವಾ ಎಸ್‌ಎಂಎಸ್ ನೋಡಲು ಬರುವುದಿಲ್ಲ. ಪಿಎಗಳೇ ನನಗೆ ಕರೆಗಳನ್ನು ಮಾಡಿಕೊಡುತ್ತಾರೆ. ನಾನು ಟಿವಿ ಕೂಡ ನೋಡಿಲ್ಲ, ಹಾಗಾಗಿ ಅವರ ಹೇಳಿಕೆಯನ್ನು ಗಮನಿಸಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ವದಂತಿಗೆ ತೆರೆ

ಇದೇ ವೇಳೆ ತಾವಿನ್ನೂ ಜೆಡಿಎಸ್‌ನಲ್ಲೇ ಇರುವುದಾಗಿ ತಿಳಿಸಿದ ಜಿ.ಟಿ. ದೇವೇಗೌಡರು, ತಕ್ಷಣಕ್ಕೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಸದ್ಯ ಈ ಇಬ್ಬರು ಪ್ರಭಾವಿ ನಾಯಕರ ವಾಕ್ಸಮರ ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !