ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈನ ಮುನಿಗಳ (Jain Monk) ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ (G.Parameshwara) ಹೇಳಿದ್ದಾರೆ.
ಬೆಳಗಾವಿ (Belagavi) ಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆ ನಡೆಯಬಾರದಿತ್ತು. ಇದರಿಂದ ನನಗೆ ಬಹಳ ನೋವಾಗಿದೆ. ಒಬ್ಬ ಸ್ವಾಮೀಜಿ, ಸಂತ ಯಾವುದೇ ಅಪೇಕ್ಷೆ ಇಲ್ಲದೇ ಜೀವನ ನಡೆಸುತ್ತಾರೆ. ಅಂಥವರಿಗೆ ಯಾವುದೇ ಕಾರಣಕ್ಕೂ ಹೀಗೆ ಆಗಬಾರದು ಎಂದಿದ್ದಾರೆ.
ರಾಜ್ಯದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧಿಸಿತರ ವಿರುದ್ಧ ಈಗಾಗಲೇ ತನಿಖೆ ಆರಂಭವಾಗಿದೆ. ಯಾರೂ ಉದ್ರೇಕಗೊಳ್ಳಬಾರದು. ಎಲ್ಲವನ್ನೂ ಕಾನೂನು ನೋಡಿಕೊಳ್ಳಲಿದೆ ಎಂದಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಮ್ಮ ಸರ್ಕಾರ ಎಲ್ಲರಿಗೂ ರಕ್ಷಣೆ ಕೊಡುತ್ತದೆ. ಹುಬ್ಬಳ್ಳಿಯ ಗುಣಧರನಂದಿ ಮಹಾರಾಜರ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇನೆ. ಈ ಮೂಲಕ ಎಲ್ಲಾ ಸಮುದಾಯದ ಸಾಧು ಸಂತರಿಗೆ ನಾನು ಭರವಸೆ ನೀಡುತ್ತೇನೆ. ಮುನಿಗಳು ಧರ್ಮಪ್ರಚಾರಕ್ಕೆ ನಡೆದುಕೊಂಡು ಹೋಗುವ ವೇಳೆ ಭದ್ರತೆ ನೀಡುತ್ತೇವೆ. ಜೈನ ಸಮುದಾಯಕ್ಕೆ ಮಂಡಳಿ ಮಾಡಿಕೊಳ್ಳಲು ಕೋರಿದ್ದಾರೆ. ಅದಕ್ಕೂ ನಮ್ಮ ಸರ್ಕಾರ ಬದ್ಧವಿದೆ. ನಾನು ಕೂಡ ಹಿರೇಕೋಡಿಯ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿದ್ದಾರೆ.