ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಭಿಕ್ಕಿಟ್ಟಿನ ಹಿನ್ನೆಲೆಯಲ್ಲಿ ಜೀನ್ಸ್ ಉದ್ಯಮವನ್ನು ಹೆಚ್ಚಿಸಲು ಅವಕಾಶ ಸಿಕ್ಕಿದ್ದು, ಬಳ್ಳಾರಿ ಸಮೀಪದ ಸಂಜೀವರಾಯನಕೋಟೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಗುರುವಾರ ಘೋಷಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಈಡೇರಿಸಲು ಈ ಯೋಜನೆಗಾಗಿ ಈಗಾಗಲೇ 154 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
‘ಉದ್ದೇಶಿತ ಪಾರ್ಕ್ನಲ್ಲಿ ಜಾಗತಿಕವಾಗಿ ಹೆಸರಾಂತ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಆರಂಭಿಸುವ ನಿರೀಕ್ಷೆಯಿದೆ. ಬಾಂಗ್ಲಾದೇಶದಲ್ಲಿನ ಅಸ್ಥಿರ ಪರಿಸ್ಥಿತಿಯು ಹೂಡಿಕೆದಾರರು ಮತ್ತು ರಫ್ತುದಾರರನ್ನು ಪರ್ಯಾಯ ಅವಕಾಶಗಳತ್ತ ಗಮನ ಹರಿಸಲು ಪ್ರೇರೇಪಿಸಿದೆ. ಹೀಗಾಗಿ, ಬಳ್ಳಾರಿ ಅನುಕೂಲಕರ ತಾಣವಾಗಿ ಹೊರಹೊಮ್ಮಿದೆ. ಜೀನ್ಸ್ ವಲಯದಲ್ಲಿ ಗಮನಾರ್ಹ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ನಾವು ಇದನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ’ ಎಂದು ತಮ್ಮ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.