ಹೊಸ ದಿಗಂತ ವರದಿ, ದಾವಣಗೆರೆ
ಸಂಕ್ರಾಂತಿಗೆ ಸೂರ್ಯಪಥ ಬದಲಾವಣೆ ಜೊತೆಗೆ ನಮ್ಮ ಡಿಸಿಎಂ ಪಥವೂ ದೆಹಲಿ ಕಡೆ ಬದಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆ ಪಥ ಬದಲಾವಣೆ ಆಗಿದ್ದು, ಮುಖ್ಯಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಡಿಕೆಶಿ ಆಪ್ತ ವಲಯದ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ವಿಶ್ವಾಸ ವ್ಯಕ್ಯಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಸಿದ್ದರಾಮಯ್ಯ ಏಳೂವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಹೊಸಬರು ಶಾಸಕರಾಗಲು ಕಾರಣರಾಗಿರುವ ಡಿ.ಕೆ.ಶಿವಕುಮಾರ್ ಕೂಡ ಎರಡು ವರ್ಷ ಸಿಎಂ ಆಗಲಿ ಎಂಬುದು ನಮ್ಮ ಆಶಯ. ಎಲ್ಲರ ಅಭಿಪ್ರಾಯದಂತೆ ನಡೆಯುತ್ತಿದೆ. ಇದು ಉತ್ತಮ ಬೆಳವಣಿಗೆ, ಶುಭಸುದ್ದಿ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಶ್ರಮ ಹೆಚ್ಚಿದೆ. ಪಕ್ಷಕ್ಕೆ ಸಾಕಷ್ಟು ದುಡಿದಿರುವ ಡಿ.ಕೆ.ಶಿವಕುಮಾರ್ ರಿಗೆ ಹೈಕಮಾಂಡ್ ಸಿಹಿ ಸುದ್ದಿ ನೀಡಲಿದೆ ಎಂದರು.
ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಡಿ.ಕೆ.ಶಿವಕುಮಾರ್ ಸಿಎಂ ಆದರೆ ಸಚಿವ ಸಂಪುಟ ಬದಲಾವಣೆ ಆಗುತ್ತದೆ. ಹೊಸಬರಿಗೆ ಅವಕಾಶ ಸಿಕ್ಕರೆ ಒಳ್ಳೆಯದು. ಇದರಿಂದ ಆಡಳಿತದಲ್ಲಿ ಬದಲಾವಣೆ ಆಗುತ್ತದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಕಸ ಗುಡಿಸುವ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ ಎಂದು ಅವರು ತಿಳಿಸಿದರು.


