ಹೊಸದಿಗಂತ ವರದಿ,ಹುಬ್ಬಳ್ಳಿ:
ದೇಶದ್ರೋಹಿ ಚಟುವಟಿಕೆಯಾದ ಪಾಕ್ ಪರ ಘೋಷಣೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗ್ರಹಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಓಟ್ ಬ್ಯಾಂಕ್ ಸಲುವಾಗಿ ಅಲ್ಪಸಂಖ್ಯಾತರ ತೃಷ್ಟೀಕರಣ ಈ ಮಟ್ಟಕ್ಕೆ ಇಳಿದಿದ್ದಾರೆ. ಪಾಕ್ ಪರ ಘೋಷಣೆ ಕೂಗಿಲ್ಲ ಹಾಗೂ ದೃಶ್ಯ ತಿರುಚಲಾಗಿದೆ ಎಂದು ವಾದ ಮಾಡಿದ್ದರು. ಒಬ್ಬ ರಾಜ್ಯ ಸಭಾ ಸದಸ್ಯರಾದ ನಾಸೀರ್ ಹುಸೇನ ಅವರಿಗೆ ದೇಶಭಿಮಾನ ಇದ್ದಿದ್ದರೆ ಘೋಷಣೆ ಕೂಗಿದ ವ್ಯಕ್ತಿ ಮುಖಕ್ಕೆ ಹೊಡೆಯಬೇಕಿತ್ತು. ಆದರೆ ಅವರು ಹಾಗೇ ಮಾಡಿಲ್ಲ. ಇದರ್ಥ ಮತಕ್ಕಾಗಿ ಇವರು ಏನಬೇಕಾದರೂ ಮಾಡುತ್ತಾರೆ ಎಂದು ಹರಿಹಾಯ್ದರು.
ಆಗ ಸದಸನದಲ್ಲಿ ರಾಜ್ಯ ಸಿಎಂ ಹಾಗೂ ಡಿಸಿಎಂ ಸಹ ಪಾಕ್ ಪರ ಘೋಷಣೆ ಖಂಡಿಸಲಿಲ್ಲ. ಕಾನೂನು ಸಚಿವ ಎಚ್.ಕೆ. ಪಾಟೀಲ ಘೋಷಣೆ ಕೂಗಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಸುಳ್ಳು ಹೇಳುವ ಮೂಲಕ ಅಲ್ಪಸಂಖ್ಯಾತರ ತೃಷ್ಟೀಕರಣ ಮಾಡಿ ಮತ ಪಡೆಯುವ ಭ್ರಮೆಯಿಂದ ಕಾಂಗ್ರೆಸ್ ನಾಯಕರು ಹೀಗೇ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸಭಾ ಸದಸ್ಯ ಸಯ್ಯದ ನಾಸೀರ ಹುಸೇನ ಅವರ ಹಿಂಬಾಲಿಕರು ಪಾಕ್ ಪರ ಘೋಷಣೆ ಕೂಗಿದ್ದಾರೆ. ಆದ್ದರಿಂದ ಅವರ ಪಾತ್ರವೂ ಇದರಲ್ಲಿದೆ. ದಾಖಲಾದ ಪ್ರಕರಣದಲ್ಲಿ ಅವರನ್ನು ಸೇರಿಸಬೇಕು. ಪ್ರಕರಣ ತನಿಖೆ ಮುಗಿಯುವವರೆಗೂ ನಾಸೀರ್ ಹುಸೇನ ಅವರು ಪ್ರಮಾಣ ವಚನ ಮಾಡಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.