ಹೊಸದಿಂಗತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಜನ್ಮಭೂಮಿಯ ರಾಮ ಮಂದಿರದಲ್ಲಿ ಜನವರಿ 22ರಂದು ಅದ್ಧೂರಿಯಾಗಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಲಿದೆ.
ಈ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ನಿರ್ಧಾರ ಮಾಡಿದ್ದಲ್ಲದೆ, ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಆದರೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಮಾತ್ರ ಭಗವಾನ್ ಶ್ರೀರಾಮನ ಸ್ಮರಣೆ ಮಾಡುತ್ತಿದ್ದಾರೆ. ಅವರು ವಿಮಾನದಲ್ಲಿ ಪ್ರಯಾಣ ಮಾಡುವಾಗಲೂ ಪುಸ್ತಕದಲ್ಲಿ “ಶ್ರೀರಾಮ.. ಶ್ರೀರಾಮ” ಎಂದು ಬರೆಯುತ್ತಿರುವ ಫೋಟೋ ಈಗ ವೈರಲ್ ಆಗಿದೆ.
ಕೆ.ಎಚ್. ಮುನಿಯಪ್ಪ ಅವರು ಕಾರ್ಯದ ನಿಮಿತ್ತ ನವ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ವಿಮಾನದಲ್ಲಿ ಕುಳಿತುಕೊಂಡೇ ಶ್ರೀರಾಮ ಸ್ಮರಣೆ ಮಾಡಿದ್ದಾರೆ. ಅಲ್ಲದೆ, ಅದಕ್ಕಾಗಿಯೇ ಒಂದು ನೋಟ್ಬುಕ್ ಅನ್ನು ಇಟ್ಟುಕೊಂಡಿದ್ದು, ಅದರಲ್ಲಿ “ಶ್ರೀರಾಮ.. ಶ್ರೀರಾಮ..” ಎಂದು ಬರೆದಿದ್ದಾರೆ.
ಸದ್ಯ ಈ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಎಐಸಿಸಿ ಸಭೆ ನಿಮಿತ್ತ ದೆಹಲಿಯತ್ತ ಅವರು ಪ್ರಯಾಣ ಬೆಳೆಸುತ್ತಿದ್ದರು.
ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಈಗಾಗಲೇ ಪ್ರಕಟ ಮಾಡಿದೆ. ಸಿಎಂ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಆದರೆ, ಇದು ತಮ್ಮ ವೈಯಕ್ತಿಕ ಇಚ್ಛೆ ಎಂಬಂತೆ ಸಚಿವ ಕೆ.ಎಚ್. ಮುನಿಯಪ್ಪ ಶ್ರೀರಾಮನ ಜಪ ಮಾಡಿರುವುದು ಹಲವರು ಮೆಚ್ಚುಗೆಗೂ ಪಾತ್ರವಾಗಿದೆ.