ದಿಗಂತ ವರದಿ ಹುಬ್ಬಳ್ಳಿ:
ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳ ಹಾಗೂ ರೈತರ ಸುರಕ್ಷತೆ ಕಾನೂನು ಜಾರಿಗೆ ತರಲು ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ(ಕೆಆರ್ಡಿ) ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ನಗರದಲ್ಲಿ ಆರನೇ ದಿನವೂ ಮುಂದುವರಿಯಿತು.
ಶನಿವಾರ ನಗರದ ಚನ್ನಮ್ಮ ವೃತ್ತ ಹಾಗೂ ಕೆಎಂಸಿ ಆಸ್ಪತ್ರೆಯ ಎದುರು ಸಮಾವೇಶಗೊಂಡ ವಿದ್ಯಾರ್ಥಿಗಳು ಚಹಾ ಮಾರುವ ಮೂಲಕ ಪ್ರತಿಭಟನೆ ನಡೆಸಿದರು. ವೈದ್ಯ ವೃತ್ತಿ ಮಾಡುವುದಕ್ಕಿಂತ ಚಹಾ ಮಾರುವುದು ಸುರಕ್ಷಿತ ಹಾಗೂ ಲಾಭದಾಯ ಎಂಬ ಉದ್ದೇಶದ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಮ್ಮ ವೃತ್ತದಲ್ಲಿ ಅಲೆದಾಡುವ ಸಾರ್ವಜನಿಕರಿಗೆ ಕರೆದು ಚಹಾ ನೀಡಿ ಪ್ರತಿಭಟನೆ ಸಹಕರಿಸಿ ಎಂದು ಮನವಿ ಮಾಡಿದರು. ಇನ್ನೂ ಕೆಎಂಸಿ ಆಸ್ಪತ್ರೆಯ ಎದುರು ಸಹ ರೋಗಿಗಳಿಗೆ, ಅವರ ಸಂಬಂಕರಿಗೆ ಚಹಾ ನೀಡಿದರು.
ಕಿಮ್ಸ್ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್ ಎಸ್.ಟಿ. ಮಾತನಾಡಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಮುಷ್ಕರ್ ಆರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದರು ಸಹ ಸರ್ಕಾರ ಸ್ಪಂದಿಸುತ್ತಿಲ್ಲ. ಇನ್ನೂ ಇಲ್ಲಿಯ ಸ್ಥಳಿಯ ಪ್ರತಿನಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ೩ ಸಾವಿರ ನೀಡುತ್ತಿದೆ. ಆದರೆ ವೈದ್ಯ ವೃತ್ತಿ ಸಲ್ಲಿಸುವ ನಮಗೆ ಶಿಷ್ಯವೇತನ ಹೆಚ್ಚಳ ಹೆಚ್ಚಳ ಮಾಡುತ್ತಿಲ್ಲ. ಇನ್ನೂ ವೈದ್ಯರಿಗೆ ಯಾವುದೇ ರೀತಿ ಸುರಕ್ಷತೆ ಇಲ್ಲ. ಈ ಬಗ್ಗೆ ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿ ಕೊಲೆ ಖಂಡನೀಯ. ಆದ್ದರಿಂದ ನಮಗೆ ಸುರಕ್ಷತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆದರ್ಶ ಇ.ಎಚ್., ರಕ್ಷಿತ್ ಎಂ.ಸಿ., ಪ್ರದೀಪ, ದಿವ್ಯ ಸಿ.ಆರ್. ಇದ್ದರು.