ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಕ್ರಿಕೆಟ್ನ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯ ದ್ವಿತೀಯ ಹಂತದ ಪಂದ್ಯಗಳು ಜನವರಿ 22ರಿಂದ ಆರಂಭವಾಗಲಿದ್ದು, ಅದಕ್ಕಾಗಿ ಕರ್ನಾಟಕ ಕ್ರಿಕೆಟ್ ಸಂಸ್ಥೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಬಾರಿ ಕೂಡ ತಂಡದ ಮುನ್ನಡೆ ಜವಾಬ್ದಾರಿಯನ್ನು ಮಯಾಂಕ್ ಅಗರ್ವಾಲ್ ಅವರಿಗೆ ಒಪ್ಪಿಸಲಾಗಿದೆ.
ಆದರೆ ಮೊದಲ ಹಂತದ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಸ್ಮರಣ್ ರವಿಚಂದ್ರನ್ ಈ ಬಾರಿ ತಂಡದಲ್ಲಿ ಕಾಣಿಸಿಕೊಳ್ಳಿಲ್ಲ. ವಿಜಯ ಹಝಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಅವರಿಗೆ ಭುಜದ ಗಾಯವಾಗಿದ್ದರಿಂದ ಅವರು ಆ ಪಂದ್ಯದಿಂದ ದೂರ ಉಳಿದಿದ್ದರು. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ರಣಜಿ ದ್ವಿತೀಯ ಹಂತದ ಪಂದ್ಯಗಳಿಂದಲೂ ಅವರನ್ನು ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ. ಅವರ ಸ್ಥಾನಕ್ಕೆ ನಿಕಿನ್ ಜೋಸ್ಗೆ ಅವಕಾಶ ಲಭಿಸಿದೆ.
ಈ ಹಂತದ ಪಂದ್ಯಗಳಿಗೆ ಆಯ್ಕೆಯಾದ ಕರ್ನಾಟಕ ತಂಡದಲ್ಲಿ ದೇವದತ್ ಪಡಿಕ್ಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್ ಸೇರಿದಂತೆ ಅನುಭವಿ ಹಾಗೂ ಯುವ ಆಟಗಾರರ ಸಮನ್ವಯ ಕಂಡುಬಂದಿದೆ. ಬೌಲಿಂಗ್ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್ ಮತ್ತು ಅಭಿಲಾಷ್ ಶೆಟ್ಟಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಗ್ರೂಪ್–ಬಿಯಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕ ತಂಡವು ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, ಎರಡು ಗೆಲುವು ಮತ್ತು ಮೂರು ಡ್ರಾಗಳೊಂದಿಗೆ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.


