ಹೊಸದಿಗಂತ ಚಿಕ್ಕಮಗಳೂರು:
ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನಗಳಿಗೆ ತೊಂದರೆಯಾಗುವ ರೀತಿಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಪ್ರವಾಸಿಗರ ಮೇಲೆ 20 ಪ್ರಕರಣಗಳನ್ನು ದಾಖಲಿಸಿರುವ ಬಣಕಲ್ ಪೊಲೀಸರು ಮತ್ತೆ ಬಿಸಿ ಮುಟ್ಟಿಸಿದ್ದಾರೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರವಾಸಿಗರ ವಿರುದ್ಧ 10 ಐಎಂವಿ ಪ್ರಕರಣಗಳು, 6 ಲಘು ಪ್ರಕರಣಗಳು ಹಾಗೂ 4 ಕೋಟ್ಪಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಡಾ.ವಿಕ್ರಮ ಅಮಟೆ ತಿಳಿಸಿದ್ದಾರೆ.
ಇಲಾಖೆಯ ಎಸ್ಎಸ್-112 ಮತ್ತು ಹೈವೇ ವಾಹನಗಳು ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ಅಧಿಕಾರಿ ಸಿಬ್ಬಂದಿಗಳು ಜಿಲ್ಲೆಯ ಪ್ರವಾಸಿ ತಾಣಗಳು ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ದಿನದ 24 ಗಂಟೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದು ವಿಶೇಷವಾಗಿ ಪ್ರವಾಸಿಗರ ಚಲನವಲನ ಕುರಿತು ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮೂಡಿಗೆರೆ ತಾಲ್ಲೂಕಿನ ದೇವರ ಮನೆಯ ಎತ್ತಿನ ಭುಜ ತಾಣದಲ್ಲಿ ಕಿರಿ ಕಿರಿ ಉಂಟುಮಾಡುತ್ತಿದ್ದ ಪ್ರವಾಸಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಅಲ್ಲಲ್ಲಿ ವಾಹನ ನಿಲ್ಲಿಸಿಕೊಂಡು ಧ್ವನಿವರ್ಧಕಗಳನ್ನು ಹಾಕಿಕೊಂಡು ರಸ್ತೆಯಲ್ಲೇ ಡ್ಯಾನ್ಸ್ ಮಾಡಿ ಇತರರಿಗೆ ತೊಂದರೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹಲವೆಡೆ ನೋ ಪಾರ್ಕಿಂಗ್ ಮತ್ತು ನೋ ಸೆಲ್ಫಿ, ನೋ ಫೋಟೋ ಬೋರ್ಡ್ಗಳನ್ನು ಅಳವಡಿಸಲಾಗಿತ್ತು. ಆದನ್ನೂ ಲೆಕ್ಕಿಸದೆ ಮನಸೋಇಚ್ಛೆ ವರ್ತಿಸುತ್ತಿದ್ದ ಯುವಕರ ಮೇಲೆ ಈಗ ಪ್ರಕರಣ ದಾಖಲಾಗಿದೆ.