Sunday, October 12, 2025

ದಕ್ಷಿಣ ಕನ್ನಡ ಜಿಲ್ಲೆಯ ಕಾಡಾನೆ ಹಾವಳಿ ತಡೆಗೆ ಪ್ರತ್ಯೇಕ ಕಾರ್ಯಪಡೆ: 48 ಸಿಬ್ಬಂದಿಗಳ ನಿಯೋಜನೆಗೆ ಖಂಡ್ರೆ ಅನುಮೋದನೆ


ಹೊಸದಿಗಂತ ಡಿಜಿಟಲ್ ಡೆಸ್ಕ್:


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ಮರಳಿ ಕಾಡಿಗಟ್ಟಲು ಪ್ರತ್ಯೇಕ ಆನೆ ಕಾರ್ಯಪಡೆಗೆ 48 ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅನುಮೋದನೆ ನೀಡಿದ್ದಾರೆ.


ಈ ಕಾರ್ಯಪಡೆಯ ನೇತೃತ್ವವನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಹಿಸಲಿದ್ದು, ಪಡೆಯಲ್ಲಿ ಒಬ್ಬರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯಾಧಿಕಾರಿ, ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪ ವಲಯ ಅರಣ್ಯಾಧಿಕಾರಿ ಹಾಗೂ 8 ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆಯ ಸಿಬ್ಬಂದಿ ಇರಲಿದ್ದಾರೆ. ಆನೆ ಕಾರ್ಯಪಡೆಯು ಕಾಡಾನೆಗಳು ಓಡಾಡುವ ವಸತಿ ಪ್ರದೇಶ, ರೈತರ ತೋಟ, ಜಮೀನಿನ ಬಳಿ ಗಸ್ತು ತಿರುಗಲಿದ್ದು, ಆನೆಗಳು ಕಂಡು ಬಂದಲ್ಲಿ ಕಾಡಿಗೆ ಮರಳಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಿದೆ. ಈ ನಡುವೆ, ತುಮಕೂರು ಜಿಲ್ಲೆಯ ವಿವಿಧೆಡೆ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿರತೆ ಕಾರ್ಯಪಡೆ ರಚಿಸಿ, 59 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಕಾರ್ಯಪಡೆ ಮುಖ್ಯಸ್ಥರಾಗಿರಲಿದ್ದು, ಪಡೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಒಬ್ಬರು ಪಶುವೈದ್ಯರು, ಒಬ್ಬ ವಲಯ ಅರಣ್ಯಾಧಿಕಾರಿ, 4 ಉಪ ವಲಯ ಅರಣ್ಯಾಧಿಕಾರಿ, 8 ಗಸ್ತು ಅರಣ್ಯ ಪಾಲಕರು, 5 ವಾಹನ ಚಾಲಕರು ಹಾಗೂ ಹೊರಗುತ್ತಿಗೆಯ 40 ಸಿಬ್ಬಂದಿಯನ್ನು ನಿಯೋಜಿಸಲು ಸಚಿವರು ಒಪ್ಪಿಗೆ ನೀಡಿದ್ದಾರೆ.

error: Content is protected !!