ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮರಣಾರ್ಥವಾಗಿ “ವಿಷ್ಣು ದರ್ಶನ ಕೇಂದ್ರ” ನಿರ್ಮಿಸಲು ನಟ ಕಿಚ್ಚ ಸುದೀಪ್ ಕಂಗೇರಿ ಬಳಿಯ ಅರ್ಧ ಎಕರೆ ಜಾಗವನ್ನು ಖರೀದಿಸಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನ ಅಡಿಗಲ್ಲು ಇಡಲಾಗುತ್ತಿದ್ದು, ಇಲ್ಲಿ 25 ಅಡಿ ಎತ್ತರದ ವಿಷ್ಣು ಪ್ರತಿಮೆ ಸ್ಥಾಪಿಸುವ ಯೋಜನೆ ಇದೆ. ಈ ಕುರಿತು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿ ನೆಲಸಮಗೊಂಡ ಬಳಿಕ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದರು. ವಿಷ್ಣುಸೇನಾ ಸಮಿತಿಯೂ ವಿರೋಧ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಗಳನ್ನು ಗಮನಿಸಿದ ಸುದೀಪ್ ಸ್ವತಃ ಮುಂದೆ ಬಂದು, ತಮ್ಮ ಸ್ವಂತ ಹಣದಿಂದ ಭೂಮಿ ಖರೀದಿಸಿ ದರ್ಶನ ಕೇಂದ್ರ ನಿರ್ಮಿಸಲು ಮುಂದಾಗಿದ್ದಾರೆ. ಈ ಕೇಂದ್ರ ಪ್ರವಾಸಿಗರಿಗೂ ತೆರೆಯಲ್ಪಡುವಂತೆ ಯೋಜಿಸಲಾಗಿದೆ.
ವಿಷ್ಣುವರ್ಧನ್ ಅವರ 75ನೇ ವರ್ಷದ ಜನ್ಮದಿನವನ್ನು ಅಮೃತ ಮಹೋತ್ಸವವಾಗಿ ಆಚರಿಸುವ ಸಂಕಲ್ಪವನ್ನು ಅಭಿಮಾನಿಗಳು ಮಾಡಿಕೊಂಡಿದ್ದರು. ಆದರೆ, ಪುಣ್ಯಭೂಮಿ ನೆಲಸಮವಾದ ಕಾರಣ ಆ ಯೋಜನೆ ಕೈಗೂಡಲಿಲ್ಲ. ಇದೀಗ ಕಿಚ್ಚ ಸುದೀಪ್ ಖರೀದಿಸಿದ ಜಾಗದಲ್ಲಿ ದರ್ಶನ ಕೇಂದ್ರ ನಿರ್ಮಾಣವಾಗಲಿದೆ. ಇದು ಮೈಸೂರಿನಲ್ಲಿರುವ ವಿಷ್ಣು ಸ್ಮಾರಕಕ್ಕೆ ಪರ್ಯಾಯವಲ್ಲ, ಬದಲಾಗಿ ವಿಷ್ಣುವರ್ಧನ್ ಅವರನ್ನು ಸ್ಮರಿಸಲು ಹೊಸ ತಾಣವಾಗಲಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.