February 22, 2026
Sunday, February 22, 2026
spot_img

ಹೊಸ ವರುಷಕ್ಕೆ ಕಿಕ್ ಔಟ್: ದರ ಏರಿಕೆಯಿಂದ ಗಡಿನಾಡ ಮದ್ಯಪ್ರಿಯರಿಗೆ ವ್ಯಾಪಾರ ವೈರಾಗ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷವನ್ನು ಸ್ವಾಗತಿಸಲು ನಾಡಿನಾದ್ಯಂತ ಲಕ್ಷಾಂತರ ಮಂದಿ ‘ಗುಂಡು, ತುಂಡು, ಡಿಜೆ, ಪಬ್’ ಎಂದು ಭರ್ಜರಿ ತಯಾರಿ ನಡೆಸಿಕೊಂಡಿದ್ದರೆ, ಅತ್ತ ಮದ್ಯದ ದರ ಏರಿಕೆಯು ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದೆ. ಅದರ ಪರಿಣಾಮವಾಗಿ, ರಾಜ್ಯದಲ್ಲಿ ಹಿಂದೆಂದೂ ಕಂಡಿರದಷ್ಟು ಕಡಿಮೆ ಬೆಲೆಗೆ ಬಿಯರ್ ಮಾರಾಟವಾಗುತ್ತಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಮದ್ಯ ಮಾರಾಟವು ಭಾರೀ ಕುಂಠಿತಗೊಂಡಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಬಿಯರ್ ಮಾರಾಟವಾಗುತ್ತಿದ್ದ ಜಿಲ್ಲೆಗಳ ಪೈಕಿ ಚಾಮರಾಜನಗರ ಎರಡನೇ ಸ್ಥಾನದಲ್ಲಿತ್ತು. ಈ ವರ್ಷ ಇದು ಮೊದಲ ಸ್ಥಾನಕ್ಕೆ ಏರುವ ನಿರೀಕ್ಷೆಯಿತ್ತು. ಆದರೆ, ರಾಜ್ಯ ಸರ್ಕಾರವು ಮದ್ಯದ ದರವನ್ನು ಏರಿಸಿದ ನಂತರ, ಈ ಅಂದಾಜುಗಳು ಹುಸಿಯಾಗಿವೆ. ಅಬಕಾರಿ ಇಲಾಖೆಯು ಕೋಟ್ಯಂತರ ರೂಪಾಯಿ ನಷ್ಟಕ್ಕೆ ಗುರಿಯಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ನೀರಿನ ಬಾಟಲಿಗಳಂತೆ ಬಿಯರ್ ಮಾರಾಟವಾಗುತ್ತಿತ್ತು. ಆದರೆ, ದರ ಏರಿಕೆಯಾದ ಬಳಿಕ ಗ್ರಾಹಕರು ಮದ್ಯದಂಗಡಿಗಳ ಕಡೆಗೆ ಮುಖವನ್ನೂ ಹಾಕುತ್ತಿಲ್ಲ ಎಂದು ಅಬಕಾರಿ ಇನ್ಸ್‌ಪೆಕ್ಟರ್ ತನ್ವೀರ್ ತಿಳಿಸಿದ್ದಾರೆ. “ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯ ಮೇಲೆ ಅತಿ ಹೆಚ್ಚು ಸುಂಕ ವಿಧಿಸಲು ಶುರು ಮಾಡಿದಾಗ, ದರ ಹೆಚ್ಚಳದಿಂದ ಜನ ಮದ್ಯಪಾನ ಮಾಡುವುದನ್ನೇ ಕೈ ಬಿಟ್ಟಿದ್ದಾರೆ,” ಎಂದು ಅವರು ವಿವರಿಸಿದ್ದಾರೆ.

ಕಳೆದ ಆರು ತಿಂಗಳ ಅವಧಿಯಲ್ಲಿ ಮದ್ಯ ಮಾರಾಟದ ಕುಸಿತದ ಅಂಕಿ-ಅಂಶಗಳು ಆತಂಕಕಾರಿಯಾಗಿವೆ:

ವಿಸ್ಕಿ (ಸ್ಲ್ಯಾಬ್ 1 ಚೀಪರ್): ಶೇಕಡಾ 14.38 ರಷ್ಟು ಮಾರಾಟ ಕುಂಠಿತಗೊಂಡಿದ್ದು, ಒಟ್ಟು 28,798 ಕೇಸ್‌ನಷ್ಟು ವಿಸ್ಕಿ ಮಾರಾಟವಾಗದೆ ಉಳಿದಿದೆ.

ಬಿಯರ್: ಕಳೆದ ವರ್ಷ ಇನ್ನಿಲ್ಲದೆ ಮಾರಾಟವಾಗುತ್ತಿದ್ದ ಬಿಯರ್‌ನ ಪೈಕಿ, ಆರು ತಿಂಗಳಲ್ಲಿ 70,642 ಕೇಸ್‌ನಷ್ಟು ಬಿಯರ್ ಮಾರಾಟವಾಗದೆ ಭಾರೀ ನಷ್ಟ ಉಂಟಾಗಿದೆ.

ಮದ್ಯದ ದರವು ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಏರುತ್ತಿರುವ ಕಾರಣ, ಗಡಿನಾಡ ಮದ್ಯಪ್ರಿಯರು ಮದ್ಯವನ್ನೇ ತ್ಯಜಿಸುತ್ತಿದ್ದಾರೆ. ಇದರಿಂದಾಗಿ ವ್ಯಾಪಾರ ಕುಂಠಿತಗೊಂಡು ಅಬಕಾರಿ ಇಲಾಖೆಯು ನಷ್ಟ ಅನುಭವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !