ದಿಗಂತ ವರದಿ ವಿಜಯಪುರ:
ರಾಜ್ಯದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಕಂಡು ಬರುತ್ತಿರುವುದರ ಮಧ್ಯೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಕುರಿತು ವರದಿ ಮಾಡಿದಕ್ಕೆ, ವರದಿಗಾರನನ್ನು ಪೊಲೀಸ್ ಅಧಿಕಾರಿಗಳೇ ಅಪಹರಣ ಮಾಡಿ, ಪಿಸ್ತೂಲ್ ತೊರಿಸಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ನಡೆದಿದೆ.
ಸಿಂದಗಿ ತಾಲೂಕಿನ ಹೊಸದಿಗಂತ ತಾಲೂಕು ವರದಿಗಾರ ಗುಂಡು ಕುಲಕರ್ಣಿ, ತಾಲೂಕಿನ ಬಗಲೂರು, ಶಂಬೆವಾಡ, ಶಿರಸಗಿ ಸುತ್ತಮುತ್ತ ರಾತ್ರಿ ವೇಳೆ ಅಕ್ರಮ ಮರಳು ದಂಧೆ, ಪೊಲೀಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ, ವರದಿ ಮಾಡಿದಕ್ಕೆ ಕುಪಿತಗೊಂಡ ಸಿಂದಗಿ ಠಾಣೆ ಪಿಎಸ್’ಐ, ಸಿಪಿಐ ಹಾಗೂ ಸಿಬ್ಬಂದಿ, ವರದಿಗಾರನನ್ನು ಮಧ್ಯರಾತ್ರಿ ಅಪಹರಿಸಿ, ಜೀಪಲ್ಲಿ ಕರೆದೊಯ್ಯು, ಅವಾಚ್ಯವಾಗಿ ನಿಂದಿಸಿ, ಪಿಸ್ತೂಲ್ ತೋರಿಸಿ, ಜೀವ ಬೆದರಿಕೆ ಒಡ್ಡಿ, ಗೂಂಡಾ ವರ್ತನೆ ತೋರಿದ್ದಾರೆ ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಅಕ್ರಮಗಳನ್ನು ಮಟ್ಟ ಹಾಕಿ, ಸಾರ್ವಜನಿಕರ ಆಸ್ತಿ, ಪಾಸ್ತಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಗಳೇ ಕಳ್ಳ, ಖದೀಮರೊಂದಿಗೆ ಕೈಜೋಡಿಸಿ ವರದಿಗಾರನ ಮೇಲೆ ಗೂಂಡಾಗಿರಿ ಪ್ರದರ್ಶಿಸಿ, ಪೊಲೀಸ್ ದರ್ಪ ತೋರಿದ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ವರದಿಗಾರನಿಗೆ ಸೂಕ್ರ ಭದ್ರತೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.