ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಕೋಣನಕುಂಟೆ ವ್ಯಾಪ್ತಿಯಲ್ಲಿ ಗೆಳೆಯರ ನಡುವಿನ ಸಣ್ಣ ಗಲಾಟೆ ಭೀಕರ ರಕ್ತಪಾತಕ್ಕೆ ಕಾರಣವಾಗಿದೆ. ವಡ್ಡರಪಾಳ್ಯದಲ್ಲಿ ನಡೆದ ಮದ್ಯಪಾನದ ಪಾರ್ಟಿಯ ವೇಳೆ, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಎದೆಗೇ ಚಾಕು ಇರಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಸಲಾಕಿಯ ಹಿಂದೆ ತಳ್ಳಿದ್ದಾರೆ.
ಏಪ್ರಿಲ್ 1ರಂದು ಗಿರಿವರ್ಧನ್ ಎಂಬಾತನ ಮನೆಯಲ್ಲಿ ರಾಹುಲ್, ದಿಲೀಪ್, ಸ್ಕಂದ ಮತ್ತು ಕಾರ್ತಿಕ್ ಎಂಬ ಗೆಳೆಯರು ಸೇರಿ ‘ಎಣ್ಣೆ ಪಾರ್ಟಿ’ ಹಮ್ಮಿಕೊಂಡಿದ್ದರು. ಎಲ್ಲರೂ ಮದ್ಯದ ಅಮಲಿನಲ್ಲಿ ತೇಲುತ್ತಿದ್ದಾಗ, ರಾಹುಲ್ ಮತ್ತು ಗಿರಿವರ್ಧನ್ ನಡುವೆ ಯಾವುದೋ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ಶುರುವಾಗಿದೆ.
ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದೆ. ಸಿಟ್ಟಿನ ಭರದಲ್ಲಿ ಗಿರಿವರ್ಧನ್ ಹೊರಗೆ ಹೋಗಿ ತನ್ನ ಕಾರಿನಲ್ಲಿದ್ದ ಚಾಕುವನ್ನು ತಂದು, ಏಕಾಏಕಿ ರಾಹುಲ್ ಎದೆಗೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡ ರಾಹುಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ.
ತಕ್ಷಣವೇ ಗಾಯಾಳು ರಾಹುಲ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋಣನಕುಂಟೆ ಪೊಲೀಸರು, ಆರೋಪಿ ಗಿರಿವರ್ಧನ್ನನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.



